ತುಮಕೂರು: ಟಾಸ್ಕ್ಗಳಿಗೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ ತಿಪಟೂರಿನ ಅನುಷಾ ಎಂಬುವರಿಗೆ ₹20.76 ಲಕ್ಷ ವಂಚಿಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರಿನ ದಾಸಿನೇನಿ ಜಗದೀಶ್ (24), ಸಂತೋಷ್ (24), ಕಾರವೇಟಿ ನಗರಂ ಮುನೀಂದ್ರ (31), ವಂಕಯಾಲ ಸುರೇಶ್ (28) ಬಂಧಿತ ಆರೋಪಿಗಳು.
ಅನುಷಾ ಅವರಿಗೆ ಟೆಲಿಗ್ರಾಮ್ ಮೂಲಕ ಪರಿಚಯವಾದ ಆರೋಪಿಗಳು ಪ್ರಾಪರ್ಟಿ ಲಿಂಕ್ ಕಳುಹಿಸಿ ರಿವೀವ್ ನೀಡುವಂತೆ ತಿಳಿಸಿದ್ದರು. ನಂತರ ಟಾಸ್ಕ್ಗಳಿಗೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು ತಿಳಿಸಿದ್ದರು. ಇದನ್ನು ನಂಬಿದ ಅನುಷಾ 2023ರ ಡಿ.22ರಿಂದ 24ರ ವರೆಗೆ ₹20,76,182 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಅವರಿಗೆ ಯಾವುದೇ ಹಣ ವಾಪಸ್ ಹಾಕಿರಲಿಲ್ಲ. ಹಣ ಕಳೆದುಕೊಂಡ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳಿಂದ ಲ್ಯಾಪ್ಟಾಪ್, ಮೊಬೈಲ್, ಚೆಕ್ಬುಕ್, ವಿವಿಧ ಬ್ಯಾಂಕ್ಗಳಲ್ಲಿ ಖಾತೆ ತೆರೆಯಲು ಬಳಸಿದ್ದ ನಕಲು ಸೀಲ್ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸೈಬರ್ ಠಾಣೆಯ ಇನ್ಸ್ಪೆಕ್ಟರ್ ಎಚ್.ಎಸ್.ನವೀನ, ಪಿಎಸ್ಐ ಪ್ರಸನ್ನಕುಮಾರ್, ಸಿಬ್ಬಂದಿಯಾದ ಹರೀಶ್, ಮಾರುತೀಶ್, ಸೈಮನ್ ವಿಕ್ಟರ್, ಶಾಂತಕುಮಾರ್, ರಘು, ಇನಾಯತ್ ಉಲ್ಲಾ ಖಾನ್, ದ್ವಾರಕೀಶ್, ಚಿಕ್ಕಣ್ಣ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.