ADVERTISEMENT

ರಾಜಕೀಯ ವೈರಿಗಳ ಸಮ್ಮಿಲನ: ಡೋಲು ಬಡಿದ ಶ್ರೀನಿವಾಸ್‌, ಹೆಜ್ಜೆ ಹಾಕಿದ ನಾಗರಾಜು

ಗುಬ್ಬಿಯಲ್ಲಿ ನಡೆದ ಕೆಂಪೇಗೌಡ ಜಯಂತಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 5:43 IST
Last Updated 30 ಜೂನ್ 2022, 5:43 IST
ಗುಬ್ಬಿನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಒಕ್ಕಲಿಗ ನಾಯಕರು ಒಂದೇ ವೇದಿಕೆಯಲ್ಲಿ ಜೊತೆಯಾದರು
ಗುಬ್ಬಿನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಒಕ್ಕಲಿಗ ನಾಯಕರು ಒಂದೇ ವೇದಿಕೆಯಲ್ಲಿ ಜೊತೆಯಾದರು   

ಗುಬ್ಬಿ: ರಾಜಕೀಯ ವೈರಿಗಳಂತಿರುವ ಶಾಸಕ ಎಸ್‌.ಆರ್ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ, ಜೆಡಿಎಸ್ ಮುಖಂಡ ಬಿ.ಎಸ್ ನಾಗರಾಜು, ಬಿಜೆಪಿ ಮುಖಂಡ ಎಚ್.ಟಿ. ಬೈರಪ್ಪ ಮೊದಲಾದ ಒಕ್ಕಲಿಗ ಸಮುದಾಯದ ಮುಖಂಡರು ಪಟ್ಟಣದಲ್ಲಿ ಬುಧವಾರ ನಡೆದ ಕೆಂಪೇಗೌಡ ಜಯಂತಿಯಲ್ಲಿ ಒಟ್ಟಾಗಿ ಪಾಲ್ಗೊಂಡರು.

ಒಕ್ಕಲಿಗ ಸಮುದಾಯದ ಎಲ್ಲ ರಾಜಕೀಯ ನಾಯಕರು ಒಟ್ಟಾಗಿ ಸೇರಲು ಕೆಂಪೇಗೌಡ ಜಯಂತಿ ಸಾಕ್ಷಿಯಾಯಿತು. ರಾಜಕೀಯ ವಿಚಾರ ಏನೇ ಇದ್ದರೂ ಸಮುದಾಯ ವಿಚಾರಕ್ಕೆ ಬಂದಾಗ ಎಲ್ಲರೂ ಒಂದೇ ಎಂಬ ಸಂದೇಶವನ್ನು ರವಾನಿಸಿದರು.

ಜಯಂತಿ ಅಂಗವಾಗಿ ಗೋಸಲ ಚನ್ನಬಸವೇಶ್ವರ ದೇವಸ್ಥಾನದಿಂದ ಕೆಂಪೇಗೌಡರ ಭಾವಚಿತ್ರ ಹಾಗೂ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀನಿವಾಸ ಕಾಲೇಜು ಮೈದಾನದ ವೇದಿಕೆ ತಲುಪಿತು. ಮೆರವಣಿಗೆ ಮಧ್ಯದಲ್ಲಿ ಶಾಸಕ ಶ್ರೀನಿವಾಸ್‌ ಡೋಲು ಬಡಿದರೆ, ಜೆಡಿಎಸ್ ಮುಖಂಡ ನಾಗರಾಜು ಹೆಜ್ಜೆ ಹಾಕಿದರು.

ADVERTISEMENT

ಕುಣಿಗಲ್ ಮಠದ ಸಿದ್ದರಾಮಚೈತನ್ಯ ಸ್ವಾಮೀಜಿ ಮಾತನಾಡಿ, ‘ಒಕ್ಕಲಿಗರು ಒಟ್ಟುಗೂಡುವುದೇ ಅಪರೂಪ. ಆದರೆ ತಾಲ್ಲೂಕಿನಲ್ಲಿ ಕೆಂಪೇಗೌಡ ಜಯಂತಿ ನೆಪದಲ್ಲಾದರೂ ಸಮುದಾಯ ಮುಖಂಡರು ಒಂದೇ ವೇದಿಕೆಯಲ್ಲಿ ಇರುವುದು ಸಂತೋಷದ ವಿಚಾರ. ಗಂಗ ಸಂತತಿಯ ವಂಶಸ್ಥನಾದ ಕೆಂಪೇಗೌಡರು ತಮ್ಮ ಧೀಮಂತ ಆಡಳಿತದಿಂದ ವಿಶ್ವಮಟ್ಟಕ್ಕೆ ಬೆಳೆದು ನಿಂತರು. ಇಂತಹ ಒಕ್ಕಲಿಗರ ಇತಿಹಾಸವನ್ನು ಎಲ್ಲರೂ ತಿಳಿಯಬೇಕಿದೆ. ಸಮುದಾಯದ ಎಲ್ಲ ಕಾರ್ಯಕ್ರಮಗಳಲ್ಲಿ ಕೆಂಪೇಗೌಡರ ಇತಿಹಾಸ ಇರುವ ಪುಸ್ತಕಗಳನ್ನು ಹಂಚಬೇಕು’ ಎಂದರು.

ಶಾಸಕ ಎಸ್.ಆರ್ ಶ್ರೀನಿವಾಸ್ ಮಾತನಾಡಿ, ‘ರಾಜಕೀಯವನ್ನು ಬದಿಗೊತ್ತಿ ಸಮುದಾಯದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ನಮ್ಮ ಕರ್ತವ್ಯ. ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಒಕ್ಕಲಿಗರೆಲ್ಲರೂ ಒಗ್ಗಟ್ಟಿನಿಂದ ಇರಬೇಕಿದೆ. ಇಂತಹ ಕಾರ್ಯಕ್ರಮಗಳಿಂದಲಾದರೂ ಸಮುದಾಯ ಒಗ್ಗೂಡಲು ಸಾಧ್ಯವಾಗುತ್ತದೆ’ ಎಂದರು.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಮಳೆ ಅಡ್ಡಿಪಡಿಸಿತು.

ಮುಖಂಡರಾದ ಹೊನ್ನಗಿರಿಗೌಡ, ಬಿ.ಎಸ್ ನಾಗರಾಜು, ಎಚ್‌.ಟಿಭೈರಪ್ಪ, ಸುರೇಶ್ ಗೌಡ, ಲೋಕೇಶ್, ಕೆಂಪೇಗೌಡ, ಮೋಹನ್, ರಂಗಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಡಿ.ಮಂಜುನಾಥ್, ಒಕ್ಕಲಿಗರ ಸಂಘದ ನಿರ್ದೇಶಕ ಲೋಕೇಶ್ ನಾಗರಾಜಯ್ಯ, ಕೆಂಪೇಗೌಡ ಯುವಶಕ್ತಿ ವೇದಿಕೆಯ ಅಧ್ಯಕ್ಷ ಅನಿಲ್ ಗೌಡ, ವಿಜಯಕುಮಾರ್, ವೆಂಕಟೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.