ಆತ್ಮಹತ್ಯೆಗೆ ಯತ್ನ
ಕೊರಟಗೆರೆ(ತುಮಕೂರು): ಮೈಕ್ರೊ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತ ತಾಲ್ಲೂಕಿನ ಅಲ್ಲಾಳಸಂದ್ರ ಹನುಮಂತಪುರದ ಮಂಗಳಮ್ಮ(45) ಎಂಬುವರು ಬುಧವಾರ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮೈಕ್ರೊ ಫೈನಾನ್ಸ್ ಸಿಬ್ಬಂದಿ ಎರಡು ದಿನಗಳಿಂದ ಮನೆ ಮುಂದೆ ಬಂದು ಗಲಾಟೆ ಮಾಡುತ್ತಿದ್ದರು. ಬುಧವಾರ ಗ್ರಾಮೀಣ ಕೂಟದ ಸಿಬ್ಬಂದಿ ಬಂದು ಕಂತಿನ ಹಣ ಕೇಳಿದ್ದಾರೆ. ಮಂಗಳಮ್ಮ ‘ಇವತ್ತು ಹಣ ಇಲ್ಲ, ಕಟ್ಟಲು ಆಗಲ್ಲ’ ಎಂದು ಹೇಳಿದ್ದಾರೆ. ಹಣ ಕೊಡುವ ತನಕ ಇಲ್ಲಿಂದ ಹೋಗಲ್ಲ ಎಂದು ಸಿಬ್ಬಂದಿ ಮನೆ ಮುಂಭಾಗ ಕುಳಿತಿದ್ದರು. ಇದರಿಂದ ಬೇಸತ್ತು ರಕ್ತದೊತ್ತಡದ ಮಾತ್ರೆಗಳನ್ನು ಸೇವಿಸಿದ್ದಾರೆ. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಹೋಟೆಲ್ ಆರಂಭಿಸುವ ಉದ್ದೇಶದಿಂದ ಒಂದು ವರ್ಷದ ಹಿಂದೆ ಮಂಗಳಮ್ಮ ಕುಟುಂಬ ಗ್ರಾಮೀಣ ಕೂಟದಲ್ಲಿ ₹2 ಲಕ್ಷ, ಎಲ್ ಆ್ಯಂಡ್ ಟಿಯಲ್ಲಿ ₹70 ಸಾವಿರ, ಆಶೀರ್ವಾದ ಸಂಸ್ಥೆಯಲ್ಲಿ ₹80 ಸಾವಿರ ಸಾಲ ಪಡೆದಿತ್ತು. ಹೋಟೆಲ್ನಿಂದ ನಷ್ಟ ಅನುಭವಿಸಿದ ಬಳಿಕ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ಮಧ್ಯೆ ಸಾಲ ಮರುಪಾವತಿಸುವಂತೆ ಮೈಕ್ರೊ ಫೈನಾನ್ಸ್ ಸಿಬ್ಬಂದಿಯಿಂದ ಒತ್ತಡ ಹೆಚ್ಚಾಗಿದೆ. ಪತ್ನಿ ಬಸವರಾಜು, ಪುತ್ರ ಪುನೀತ್ ಸಾಲ ತೀರಿಸಲು ಪರದಾಡುತ್ತಿದ್ದಾರೆ. ಇಡೀ ಕುಟುಂಬ ದಿನಗೂಲಿ ನಂಬಿ ಜೀವನ ಸಾಗಿಸುತ್ತಿದೆ. ಗ್ರಾಮೀಣ ಕೂಟದಲ್ಲಿ ಪಡೆದ ಸಾಲಕ್ಕೆ 40 ಕಂತು ಕಟ್ಟಿದ್ದರು. ಇನ್ನೂ 42 ಕಂತು ಹಣ ಕಟ್ಟುವುದು ಬಾಕಿ ಇತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.