ADVERTISEMENT

ನಂದಿಹಳ್ಳಿ–ಮಲ್ಲಸಂದ್ರ ರಿಂಗ್‌ ರಸ್ತೆಗೆ ವಿರೋಧ: ಅಸಹಕಾರ ಚಳವಳಿ ನಡೆಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 5:39 IST
Last Updated 9 ಫೆಬ್ರುವರಿ 2026, 5:39 IST
<div class="paragraphs"><p>ತುಮಕೂರು ತಾಲ್ಲೂಕು ಗೂಳೂರಿನ&nbsp;ಶೂಲದ ಆಂಜನೇಯ ದೇವಾಲಯದ ಬಳಿ ಭಾನುವಾರ ರೈತರ ಕಾರ್ಯಾಗಾರ ನಡೆಯಿತು. </p></div>

ತುಮಕೂರು ತಾಲ್ಲೂಕು ಗೂಳೂರಿನ ಶೂಲದ ಆಂಜನೇಯ ದೇವಾಲಯದ ಬಳಿ ಭಾನುವಾರ ರೈತರ ಕಾರ್ಯಾಗಾರ ನಡೆಯಿತು.

   

ತುಮಕೂರು: ನಂದಿಹಳ್ಳಿ– ಮಲ್ಲಸಂದ್ರ– ವಸಂತನರಸಾಪುರ ರಿಂಗ್ ರಸ್ತೆ ನಿರ್ಮಾಣ ವಿರೋಧಿಸಿ ತಾಲ್ಲೂಕಿನ ಗೂಳೂರಿನ ಶೂಲದ ಆಂಜನೇಯ ದೇವಾಲಯದ ಬಳಿ ಭಾನುವಾರ ನಡೆದ ರೈತರ ಸಮಾವೇಶದಲ್ಲಿ ಯೋಜನೆಯ ವಿರುದ್ಧ ಹೋರಾಟ ರೂಪಿಸುವ ನಿರ್ಧಾರ ಕೈಗೊಳ್ಳಲಾಯಿತು.

ಸಂಯುಕ್ತ ಹೋರಾಟ– ಕರ್ನಾಟಕ ಸಮಿತಿಯಿಂದ ಆಯೋಜಿಸಿದ್ದ ಸಮಾವೇಶ, ಕಾರ್ಯಾಗಾರದಲ್ಲಿ ರಿಂಗ್‌ ರಸ್ತೆಗಾಗಿ ಭೂಮಿ ಕಳೆದುಕೊಳ್ಳುತ್ತಿರುವ 26 ಗ್ರಾಮಗಳ ರೈತರು ಭಾಗವಹಿಸಿದ್ದರು. ಪ್ರಸ್ತಾಪಿತ ರಸ್ತೆಯ ವಿಸ್ತೃತ ಯೋಜನಾ ವರದಿಯ (ಡಿಪಿಆರ್‌) ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಭೂ ಬಳಕೆ ಮತ್ತು ಭೂ ಹೊದಿಕೆಯ ನೀತಿಗೆ ಒತ್ತಾಯಿಸಿದರು.

ADVERTISEMENT

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಜತೆ ಸಮಾಲೋಚನೆ ನಡೆಸಬೇಕು. ಕೂಡಲೇ ಯೋಜನೆ ಕೈ ಬಿಡಬೇಕು. ಅತ್ಯಂತ ಪಾರದರ್ಶಕವಾಗಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು. ಈ ಎಲ್ಲ ಕ್ರಮ ಕೈಗೊಳ್ಳದಿದ್ದರೆ ಶಾಂತಿಯುತ ಅಸಹಕಾರ ಚಳವಳಿ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.

‘ಗಾಂಧೀಜಿಯ ಸತ್ಯ, ಅಹಿಂಸೆಯ ಮಾರ್ಗದಲ್ಲಿ ಹೋರಾಟ ನಡೆಸಿದರೆ ಗೆಲುವು ಸಾಧಿಸಬಹುದು. ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಾವೆಲ್ಲ ಹೋರಾಟಕ್ಕೆ ಮುಂದಾಗಬೇಕು’ ಎಂದು ಏಕತಾ ಪರಿಷತ್‍ನ ಸಂಸ್ಥಾಪಕ ಪಿ.ವಿ.ರಾಜಗೋಪಾಲ್‌ ಕರೆ ನೀಡಿದರು.

ಯೋಜನೆ ಜಾರಿಯಿಂದ ಆಗುವ ಪರಿಣಾಮಗಳ ಕುರಿತು ಅಧ್ಯಯನ ಮಾಡದೆ, ರೈತರ ಜತೆಗೆ ಸಮಾಲೋಚನೆ ನಡೆಸದೆ ಡಿಪಿಆರ್‌ ಸಿದ್ಧಪಡಿಸಲಾಗಿದೆ. ಇದು ಅವೈಜ್ಞಾನಿಕ ವರದಿ. ವಿದ್ಯಾವಂತ ಯುವ ಸಮೂಹ ರೈತರ, ಕಾರ್ಮಿಕರ, ಸಾಮಾನ್ಯ ಜನರ ಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಗಾಂಧಿ ಸಹಜ ಬೇಸಾಯ ಆಶ್ರಮದ ಸಂಸ್ಥಾಪಕ ಡಾ.ಮಂಜುನಾಥ್‌, ‘ರೈತರು, ಹೋರಾಟಗಾರರು, ಸಂಘಟನೆಗಳ ಮುಖಂಡರನ್ನು ಕತ್ತಲೆಯಲ್ಲಿ ಇಟ್ಟು, ಯೋಜನೆ ರೂಪಿಸಲಾಗಿದೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಅನುಮೋದನೆ ಪಡೆಯಲಾಗಿದೆ. ಶೇ 80ರಷ್ಟು ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರೂ, ಶೇ 70ರಷ್ಟು ಒಣ ಭೂಮಿ ಇದೆ ಎಂದು ಸುಳ್ಳು ಮಾಹಿತಿ ನೀಡಲಾಗಿದೆ’ ಎಂದು ಆರೋಪಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎ.ಗೋವಿಂದರಾಜು, ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕ ಸಿ.ಯತಿರಾಜು, ಮುಖಂಡ ದೊಡ್ಡಮಾಳಯ್ಯ, ಜಿ.ಸಿ.ಶಂಕರಪ್ಪ, ಚಿಕ್ಕಬೋರೇಗೌಡ, ರವೀಶ್‌, ಎಸ್.ಎನ್‌.ಸ್ವಾಮಿ, ಕಂಬೇಗೌಡ, ಪಂಡಿತ್ ಜವಾಹರ್‌, ದೊಡ್ಡನಂಜಯ್ಯ, ಬಿ.ಲೋಕೇಶ್‌ ಮೊದಲಾದವರು ಪಾಲ್ಗೊಂಡಿದ್ದರು.

ಆಳುವ ಸರ್ಕಾರಗಳು ನಮ್ಮನ್ನು ಬೆದರಿಸುವ ಒಡೆದು ಆಳುವ ಕೆಲಸ ಮಾಡುತ್ತಿವೆ. ಬಹಳ ಎಚ್ಚರಿಕೆಯಿಂದ ಹೋರಾಟ ಕಟ್ಟಬೇಕು. ಗಾಂಧಿ ಮಾರ್ಗದಲ್ಲಿ ನಡೆಯಬೇಕು
ಕೆ.ದೊರೈರಾಜ್‌ ಪಿಯುಸಿಎಲ್‌ ಅಧ್ಯಕ್ಷ

ಜನರ ಬದುಕು ಬೀದಿಗೆ

ರಿಂಗ್‌ ರಸ್ತೆ ನಿರ್ಮಾಣದಿಂದ ಗ್ರಾಮೀಣ ಭಾಗದ ಲಕ್ಷಾಂತರ ಜನರು ಊಟ ಕಳೆದುಕೊಳ್ಳುತ್ತಾರೆ. ಅವರ ಬದುಕು ಬೀದಿಗೆ ಬರಲಿದೆ ಎಂದು ಪರಿಸರವಾದ ಸುರೇಶ್ ಹೆಬ್ಳೀಕರ್‌ ಆತಂಕ ವ್ಯಕ್ತಪಡಿಸಿದರು. ರೈತರ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಂಡು ನಡೆಸುವ ಯಾವುದೇ ಅಭಿವೃದ್ಧಿ ಯೋಜನೆ ಪರಿಸರ ಸ್ನೇಹಿ ಆಗಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಾವು ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಬಹುದು. ಇದರ ಬಗ್ಗೆ ಯುವ ಜನರಿಗೆ ಪರಿಜ್ಞಾನವೇ ಇಲ್ಲದಂತಾಗಿದೆ ಎಂದು ಬೇಸರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.