
ಹೆಬ್ಬೂರು: ಶತಮಾನ ಕಂಡ ಹೆಬ್ಬೂರು ಶಾಲೆಗೆ ₹1.68 ಕೋಟಿ ಸಿಎಸ್ಆರ್ ಅನುದಾನದಲ್ಲಿ ಸುಸಜ್ಜಿತ ಕೊಠಡಿ, ಶೌಚಾಲಯ, ಗ್ರಂಥಾಲಯ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಬಿ.ಸುರೇಶ್ಗೌಡ ಹೇಳಿದರು.
ಹೆಬ್ಬೂರಿನಲ್ಲಿ ಸೋಮವಾರ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ಬಿಡದಿಯ ಬಾಷ್ ಇಂಟರ್ನ್ಯಾಷನಲ್ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ ಶಾಲೆ ಅಭಿವೃದ್ಧಿ ಪಡಿಸಲಾಗುತ್ತಿದೆ. ₹1.68 ಕೋಟಿಯನ್ನು ಕಂಪನಿ ನೀಡಿದೆ. ನಾಗವಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸರ್ಕಾರ ನೀಡಿದ ಹಣ ವಾಪಸ್ ಹೋಗಿತ್ತು. ಈ ಕುರಿತು ಸದನದಲ್ಲಿ ಮಾತನಾಡಿ ಮತ್ತೆ ₹1.48 ಕೋಟಿ ಬಿಡುಗಡೆ ಮಾಡಿಸಿದ್ದೇನೆ. ಸರ್ಕಾರದ ಹಣ ತರುವುದು ಅಷ್ಟು ಕಷ್ಟ ಇದೆ’ ಎಂದರು.
ಮುಂದಿನ ನೂರು ವರ್ಷ ಬಾಳಿಕೆ ಬರುವಂತಹ ಕಟ್ಟಡ ನಿರ್ಮಿಸಲಾಗುವುದು. ಪೋಷಕರು ಇಂಗ್ಲಿಷ್ ವ್ಯಾಮೋಹದಿಂದ ಹೊರ ಬರಬೇಕು. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಶಾಲಾ–ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸಲಹೆ ಮಾಡಿದರು.
ಬಾಷ್ ಕಂಪನಿಯ ಸಕಿನ ಬೇಕರ್, ‘ಸರ್ಕಾರಿ ಶಾಲೆ ನಿರ್ಮಾಣ ನಮ್ಮ ಸಂಸ್ಥೆಯ ಉದ್ದೇಶ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
ಮುಖಂಡರಾದ ಬಾಬು, ಶಿವಕುಮಾರ್, ಪ್ರದೀಪ್, ಸಿದ್ದೇಗೌಡ, ಚಿಕ್ಕಸ್ವಾಮಿ, ವೆಂಕಟೇಶ್, ಅನುಗೌಡ, ಕೇಶವಮೂರ್ತಿ, ಮಂಜುಳಾ, ತೇಜಸ್, ಅಕ್ಕಮ್ಮ, ಮಾಸ್ತಿಗೌಡ, ಮೋಹನಕುಮಾರ್, ನರಸಿಂಹಮೂರ್ತಿ, ರಾಜಶೇಖರ್, ಪ್ರಭಾಕರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.