ತುರುವೇಕೆರೆ: ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಕಾವ್ಯ ರಾಜ್ಕುಮಾರ್ ಅವರು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವುದು ತಾಲ್ಲೂಕಿನಲ್ಲಿ ಕುತೂಹಲದ ಕೇಂದ್ರ ಬಿಂದುವಾಗಿದೆ.
ಕಾವ್ಯ ರಾಜ್ಕುಮಾರ್ ಅವರು ದಂಡಿನಶಿವರ ಕ್ಷೇತ್ರದ 2ನೇ ಬ್ಲಾಕ್ನಿಂದ ಸ್ಪರ್ಧಿಸಿದ್ದಾರೆ.
‘ನಾನು 2014ರಲ್ಲಿ ದಂಡಿನಶಿವರ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆದಿದ್ದೆ. 17 ತಿಂಗಳು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದೇನೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾಗಿದ್ದಾಗ ₹15 ಲಕ್ಷ ಅನುದಾನ ಮಾತ್ರ ಬರುತ್ತಿತ್ತು. ಆದರೆ ಕ್ಷೇತ್ರದ ಗ್ರಾಮಗಳ ಸಂಖ್ಯೆ ಹೆಚ್ಚಿದ್ದವು. ಕಡಿಮೆ ಹಣದಲ್ಲಿ ಯಾವ ಗ್ರಾಮವನ್ನು ಪರಿಪೂರ್ಣ ಅಭಿವೃದ್ದಿ ಮಾಡಲಾಗುತ್ತಿಲ್ಲ ಎಂಬ ಅಸಮಾಧಾನವಿತ್ತು’ ಎನ್ನುತ್ತಾರೆ ಕಾವ್ಯ.
ಇತ್ತೀಚೆಗೆ ಸರ್ಕಾರ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡುತ್ತಿದೆ. ದಂಡಿನಶಿವರ ಮತ್ತು ಅದರ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದೇನೆ. ಗ್ರಾಮ ಪಂಚಾಯಿತಿಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ವಿಶ್ವಾಸವಿದೆ ಎನ್ನುತ್ತಾರೆ ಅವರು.
ಈಗಾಗಲೇ ದಂಡಿನಶಿವರ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದರು.
ಮೂರ್ನಾಲ್ಕು ದಿನಗಳಿಂದ ಬಿ.ಹೊಸೂರು, ದಂಡಿನಶಿವರ, ದಂಡಿನಶಿವರ ಜನತಾ ಕಾಲೊನಿಗಳಲ್ಲಿ ಪ್ರಚಾರ ನಡೆಸಿದ್ದೇವೆ. ಅಲ್ಲಿನ ಜನರುಹಲವು ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಸೋಲು ಗೆಲುವುಗಳನ್ನು ಸಮನಾಗಿ
ಸ್ವೀಕರಿಸಿ ಜನರ, ಪ್ರೀತಿ ವಿಶ್ವಾಸ ಗಳಿಸಲು ಇನ್ನಷ್ಟು ಗಟ್ಟಿಯಾಗುವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.