ಶಿರಾ: ನಗರದ ಮಲ್ಲಿಕ್ ರೆಹಾನ್ ದರ್ಗಾ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ₹12 ಕೋಟಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ನಗರದಲ್ಲಿ ₹1.25 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಿರುವ ಖಾಸಗಿ ಬಸ್ ನಿಲ್ದಾಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಮಲ್ಲಿಕ್ ರೆಹಾನ್ ದರ್ಗಾದಿಂದ ಐಬಿ ವೃತ್ತದವರೆಗೆ ರಸ್ತೆ ಬದಿಯಲ್ಲಿ ಒಡಾಡಲು ಸಾಧ್ಯವಾಗುತ್ತಿಲ್ಲ. ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಅಕ್ರಮಿಸಿಕೊಂಡಿದ್ದಾರೆ. ಒಂದು ವೇಳೆ ಏನಾದರೂ ಅವಘಡ ಸಂಭವಿಸಿ ಅಪಘಾತವಾದರೆ ಏನಾಗುವುದು ಎನ್ನುವುದನ್ನು ಊಹೆ ಮಾಡಲು ಸಾಧ್ಯವಾಗುತ್ತಿಲ್ಲ. ಅದ್ದರಿಂದ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದರು.
ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಶಿರಾ ನಗರ ನಿರ್ಮಾತೃ ಕಸ್ತೂರಿ ರಂಗಪ್ಪನ ನಾಯಕನ ಹೆಸರು ಇಡುವಂತೆ ವಾಲ್ಮೀಕಿ ಸಮುದಾಯದ ಮುಖಂಡರು ಮನವಿ ಮಾಡಿದರು. ಜೊತೆಗೆ ವೇದಿಕೆಯಲ್ಲಿ ಮಾತನಾಡಿದ ನಗರಸಭೆ ಸದಸ್ಯ ಉಮಾ ವಿಜಯರಾಜು ಹಾಗೂ ಪೂಜಾ ಅವರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕಸ್ತೂರಿ ರಂಗಪ್ಪನಾಯಕರ ಹೆಸರನ್ನು ಹಾಗೂ ಖಾಸಗಿ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಪಿ.ಎಂ.ರಂಗನಾಥಪ್ಪ ಅವರ ಹೆಸರನ್ನು ಇಡುವಂತೆ ಶಾಸಕರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಜಯಚಂದ್ರ, ಈ ಬಗ್ಗೆ ಚರ್ಚಿಸಿ, ಸೂಕ್ತ ಸಮಯದಲ್ಲಿ ಎಲ್ಲರಿಗೂ ತೃಪ್ತಿಯಾಗುವಂತಹ ಹೆಸರನ್ನು ತೀರ್ಮಾನ ಮಾಡಲಾಗುವುದು ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷ ಜೀಷಾನ್ ಮೆಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜೇಯಕುಮಾರ್, ಸದಸ್ಯರಾದ ಆರ್.ರಾಮು, ಎಸ್.ಎಲ್.ರಂಗನಾಥ್, ಉಮಾ ವಿಜಯರಾಜು, ಪೂಜಾ, ಸ್ವಾತಿ ಮಂಜೇಶ್, ತೇಜಾ ಭಾನುಪ್ರಕಾಶ್, ಶಿವಶಂಕರ್, ಆರ್.ರಾಘವೇಂದ್ರ, ಸುಶೀಲಾ ವಿರೂಪಾಕ್ಷ, ಮಹೇಶ್ ಕುಮಾರ್, ಬಿ.ಎಂ.ರಾಧಾಕೃಷ್ಣ, ರಫೀವುಲ್ಲಾ, ಮಜರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.