
ಕೊರಟಗೆರೆ: ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ಗುಡಿ ಕೈಗಾರಿಕೆ ಉತ್ತೇಜನ ಉದ್ದೇಶದಿಂದ ನಿರ್ಮಾಣಗೊಂಡ ಲಕ್ಷಾಂತರ ರೂಪಾಯಿ ವೆಚ್ಚದ ಕಟ್ಟಡಗಳು ನಿರ್ಮಾಣವಾದ ದಿನದಿಂದಲೂ ಉದ್ದೇಶವನ್ನೇ ಕಾಣದೆ ಮೌನವಾಗಿ ನಿಂತು ಹಾಳಾಗುತ್ತಿವೆ.
25 ವರ್ಷಗಳ ಹಿಂದೆ ಪಟ್ಟಣದ ಸಂತೆ ಮೈದಾನ, ತಾಲ್ಲೂಕಿನ ಅಗ್ರಹಾರ, ತೋವಿನಕೆರೆ, ಹೊಸಹಳ್ಳಿ ಹಾಗೂ ಹೊಳವನಹಳ್ಳಿ ಗ್ರಾಮಗಳಲ್ಲಿ ಗುಡಿ ಕೈಗಾರಿಕೆ ಚಟುವಟಿಕೆ ನಡೆಸುವ ಉದ್ದೇಶದಿಂದ ಶೆಡ್ಗಳನ್ನು ನಿರ್ಮಿಸಲಾಗಿತ್ತು. ಆದರೆ ಈ ಕಟ್ಟಡಗಳಲ್ಲಿ ಒಂದು ದಿನವೂ ಉದ್ದೇಶಿತ ಕಾರ್ಯಚಟುವಟಿಕೆ ನಡೆದ ದಾಖಲೆಗಳಿಲ್ಲ. ಸಾರ್ವಜನಿಕ ಹಣದಲ್ಲಿ ನಿರ್ಮಿತವಾದ ಈ ಶೆಡ್ಗಳು ಕಾಲಕ್ರಮೇಣ ನಿರುಪಯುಕ್ತವಾಗಿ ಹಾಳಾಗುತ್ತಿವೆ.
ಕೆಲ ಗ್ರಾಮಗಳಲ್ಲಿ ಈ ಶೆಡ್ಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಯಾವ ನಿಯಮ, ಯಾವ ಮಾನದಂಡದ ಮೇಲೆ ಈ ಮಾರಾಟ ನಡೆದಿದೆ ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ಒಳಗಡೆ ವ್ಯವಹಾರಗಳ ಮೂಲಕ ಈ ಕಟ್ಟಡಗಳು ಖಾಸಗಿಯವರ ಪಾಲಾಗಿರುವ ಶಂಕೆ ಸಾರ್ವಜನಿಕರಲ್ಲಿ ಮೂಡಿದೆ.
ಪಟ್ಟಣದ ಸಂತೆ ಮೈದಾನದಲ್ಲಿನ ಶೆಡ್ ನಿರ್ಮಾಣಗೊಂಡು ಹಲವು ವರ್ಷಗಳಾದರೂ, ಇಲ್ಲಿ ಯಾವುದೇ ಗುಡಿ ಕೈಗಾರಿಕೆ, ತರಬೇತಿ ಅಥವಾ ಉತ್ಪಾದನಾ ಚಟುವಟಿಕೆಗಳು ನಡೆದಿಲ್ಲ. ಆದರೆ ಅಚ್ಚರಿಯ ವಿಷಯವೆಂದರೆ, ಬಳಕೆ ಇಲ್ಲದಿದ್ದರೂ ರಿಪೇರಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ.
2013–14ನೇ ಸಾಲಿನಲ್ಲಿ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ‘ಟೈಲರಿಂಗ್ ಸೆಂಟರ್’ ಹೆಸರಿನಲ್ಲಿ ರಿಪೇರಿ ಹಾಗೂ ನವೀಕರಣಕ್ಕೆ ₹5 ಲಕ್ಷ ವೆಚ್ಚ ಮಾಡಲಾಗಿದೆ. ಆದರೆ ಇದುವರೆಗೆ ಇಲ್ಲಿ ಒಂದು ದಿನವೂ ಟೈಲರಿಂಗ್ ತರಬೇತಿ ನಡೆದಿಲ್ಲ. ಕಟ್ಟಡ ಮಾತ್ರ ಮುಚ್ಚಿದ ಸ್ಥಿತಿಯಲ್ಲೇ ಉಳಿದು ಹಾಳಾಗುತ್ತಿದೆ.
ಪ್ರಸ್ತುತ ಈ ಕಟ್ಟಡವನ್ನು ಕೈಗಾರಿಕಾ ವಿಸ್ತರಣಾಧಿಕಾರಿ ಕಚೇರಿಗೆ ಬಳಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರಂತೆ ಸೋಮವಾರ ಮತ್ತು ಗುರುವಾರ ಅಧಿಕಾರಿ ಲಭ್ಯ ಎಂದು ಫಲಕ (ಬೋರ್ಡ್) ಅಳವಡಿಸಲಾಗಿದೆ. ಆದರೆ ವಾಸ್ತವದಲ್ಲಿ ಇಲ್ಲಿಯವರೆಗೆ ಒಮ್ಮೆಯೂ ಅಧಿಕಾರಿಗಳು ಬಂದು ಕಚೇರಿ ಕಾರ್ಯನಿರ್ವಹಿಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಿಲ್ಲ.
ಕಟ್ಟಡ ಸದಾ ಮುಚ್ಚಿರುವುದರಿಂದ ಕಿಡಿಗೇಡಿಗಳ ಉಪಟಳ, ಮದ್ಯಪಾನ, ಅಕ್ರಮ ಚಟುವಟಿಕೆಗಳಿಗೆ ತಾಣವಾಗುವ ಆತಂಕವೂ ಹೆಚ್ಚಾಗಿದೆ. ಸಾರ್ವಜನಿಕ ಹಣದಲ್ಲಿ ನಿರ್ಮಾಣವಾದ ಕಟ್ಟಡವೇ ಸಾರ್ವಜನಿಕರಿಗೆ ಅಪಾಯವಾಗುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಅಧಿಕಾರಿಗಳ ವಲಯದಲ್ಲಿ ಮಾತ್ರ ಸ್ಪಷ್ಟ ಉತ್ತರಗಳಿಲ್ಲ.
ಕಟ್ಟಡವನ್ನು ಕಚೇರಿ ಉದ್ದೇಶಕ್ಕೆ ಬಳಸುವ ನಿರ್ಧಾರವಿದೆ. ಸಿಬ್ಬಂದಿ ಕೊರತೆ ಮತ್ತು ಆಡಳಿತಾತ್ಮಕ ಸಮಸ್ಯೆಯಿಂದ ಚಟುವಟಿಕೆಗಳು ನಿರಂತರವಾಗಿಲ್ಲ. ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಕೈಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.
ಗುಡಿ ಕೈಗಾರಿಕೆ ಮೂಲಕ ಗ್ರಾಮೀಣ ಉದ್ಯೋಗ ಸೃಷ್ಟಿಸಬೇಕೆಂಬ ಉದ್ದೇಶದಲ್ಲಿ ಆರಂಭವಾದ ಯೋಜನೆ ಇಂದು ನಿರ್ಲಕ್ಷ್ಯ, ಅಕ್ರಮ ಮತ್ತು ದುರುಪಯೋಗದ ಸಂಕೇತವಾಗಿ ಉಳಿದಿದೆ. ಈ ಶೆಡ್ಗಳ ನಿರ್ಮಾಣದಿಂದ ಇದುವರೆಗೆ ಒಂದು ಉದ್ಯೋಗವೂ ಸೃಷ್ಟಿಯಾಗಿಲ್ಲ ಎಂಬುದು ವಿಷಾದನೀಯ.
ಸಾರ್ವಜನಿಕ ಹಣದ ಬಳಕೆ, ಶೆಡ್ಗಳ ಮಾರಾಟದ ಪ್ರಕ್ರಿಯೆ, ರಿಪೇರಿ ಹೆಸರಿನ ವೆಚ್ಚಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ತಾಲ್ಲೂಕಿನ ನಾಗರಿಕರು ಒತ್ತಾಯಿಸಿದ್ದಾರೆ.
ಚಟುವಟಿಕೆ ನಡೆಯಲೇ ಇಲ್ಲ
ಗುಡಿ ಕೈಗಾರಿಕೆ ಉತ್ತೇಜನ ಎಂದು ಹೇಳಿ ನಮ್ಮ ಊರಿನಲ್ಲಿ ಕಟ್ಟಡ ಕಟ್ಟಿದರು. ಆದರೆ ಒಂದು ದಿನವೂ ತರಬೇತಿ ಉದ್ಯೋಗ ಚಟುವಟಿಕೆ ಏನೂ ನಡೆಯಲೇ ಇಲ್ಲ. ಈಗ ಅದು ಹಾಳಾಗುತ್ತಿದೆ. ಯಾರೋ ಮಾರಾಟ ಮಾಡಿಕೊಂಡಿದ್ದಾರೆ ಎನ್ನುವ ಮಾತು ಕೇಳಿಸುತ್ತಿದೆ. ಅದೂ ಕೂಡ ಸ್ಪಷ್ಟತೆ ಇಲ್ಲ. ಇದು ನೇರವಾಗಿ ಸಾರ್ವಜನಿಕ ಹಣದ ದೋಚಾಟ. ವೆಂಕಟೇಶ್ ಸ್ಥಳೀಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.