ADVERTISEMENT

ದೋಣಿ ದುರಂತ: ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 15:11 IST
Last Updated 18 ಸೆಪ್ಟೆಂಬರ್ 2021, 15:11 IST

ಬೈಂದೂರು (ಉಡುಪಿ): ತಾಲ್ಲೂಕಿನ ಪಡುವರಿ ಗ್ರಾಮದ ತಾರಾಪತಿಯಲ್ಲಿ ಶುಕ್ರವಾರ ನಾಡದೋಣಿ ಮಗುಚಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಶವ ಶನಿವಾರ ಪತ್ತೆಯಾಗಿದೆ.

‘ಜೈ ಗುರೂಜಿ’ ದೋಣಿ ಮಾಲೀಕ ಚರಣ್‌ರಾಜ್ ಖಾರ್ವಿ (25)ಅವರಶವ ಅಮ್ಮನವರ ತೊಪ್ಲು ಬಳಿ ಹಾಗೂ ಅಣ್ಣಪ್ಪ ಖಾರ್ವಿ (40)ಅವರ ಶವ ಕರ್ಕಿಕಳಿ ಬಳಿ ಸಿಕ್ಕಿದೆ.

ಶುಕ್ರವಾರ ಮೀನುಗಾರಿಕೆ ಮುಗಿಸಿ ಅಳ್ವೆಕೋಡಿಗೆ ಬರುವಾಗ ಅಲೆಗಳ ಹೊಡೆತಕ್ಕೆ ಸಿಕ್ಕು ದೋಣಿ ಮಗುಚಿತ್ತು. ಅದರಲ್ಲಿದ್ದ 7 ಮೀನುಗಾರರ ಪೈಕಿ ಇಬ್ಬರು ನಾಪತ್ತೆಯಾಗಿದ್ದರು. ವಿಜೇತ್, ಪ್ರವೀಣ್, ಸಚಿನ್, ಸುಮಂತ್, ವಾಸುದೇವ ಖಾರ್ವಿ ಅವರನ್ನು ಕರಾವಳಿ ಕಾವಲು ಪಡೆಯ ಪೋಲಿಸರು ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದರು.

ADVERTISEMENT

ಶಾಸಕರ ಭೇಟಿ: ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಸ್ಥಳಕ್ಕೆ ಭೇಟಿನೀಡಿ, ಮೃತ ಮೀನುಗಾರರ ಕುಟುಂಬಕ್ಕೆ ಸರ್ಕಾರದಿಂದ ₹ 6 ಲಕ್ಷ ಪರಿಹಾರದ ಜತೆಗೆ ವೈಯಕ್ತಿಕ ಪರಿಹಾರ ನೀಡುವುದಾಗಿ ತಿಳಿಸಿ, ಇಂತಹ ದುರ್ಘಟನೆಗಳು ಮರುಕಳಿಸದಿರಲು ಮೀನುಗಾರರಿಗೆ ಲೈಫ್‌ ಜಾಕೆಟ್‌ ಒದಗಿಸುವ ಭರವಸೆ ನೀಡಿದರು.

ಮತ್ತೊಂದೆಡೆ, ಗಂಗೊಳ್ಳಿಯಲ್ಲಿ ಶುಕ್ರವಾರ ಪಾತಿದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ದೋಣಿ ಮಗುಚಿ ನಾಪತ್ತೆಯಾಗಿದ್ದ ದೇವೇಂದ್ರ ಖಾರ್ವಿ (35) ಅವರ ಶವ ಶನಿವಾರ ಇಲ್ಲಿನ ಪಂಚಗಂಗಾವಳಿ ನದಿ ತೀರದ ಕಳವಿನ ಬಾಗಿಲು ಬಳಿ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.