ಬೈಂದೂರು: ಇಲ್ಲಿನ ವತ್ತಿನೆಣೆ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಒಂದೆಡೆಯಾದರೆ. ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ವತ್ತಿನೆಣೆಯಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೂ ಮೊದಲು ಇಲ್ಲಿನ ಅಪಾಯಕಾರಿ ಕಡಿದಾದ ತಿರುವಿನಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇತ್ತು. ಅದಕ್ಕಾಗಿ ಎತ್ತರ ಮತ್ತು ತಿರುವನ್ನು ಬದಲಾಯಿಸಲು ಚತುಷ್ಪಥ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಗುಡ್ಡವನ್ನು ಕೊರೆದ ಪರಿಣಾಮ ಮಳೆಗಾಲಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ತಡೆಯಾಗುತ್ತಿದೆ.
ಬೈಂದೂರು ದೊಂಬೆ ಶಿರೂರು ಮಾರ್ಗಗಳಲ್ಲಿಯೂ ಗುಡ್ಡ ಜರಿತವಾಗುತ್ತಿದೆ. ಇಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಭಯದಿಂದ ಸಂಚರಿಸುವ ಪರಿಸ್ಥಿತಿ ಇದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ನಾಕಟ್ಟೆಯಿಂದ ಬೈಂದೂರು ಮುಖ್ಯರಸ್ತೆ, ಸೀತಾರಾಮಚಂದ್ರ ದೇವಸ್ಥಾನ, ಜಾಮೀಯಾ ಮಸೀದಿ, ಕಸ್ಟಂ ರಸ್ತೆ ಹಾಗೂ ಚರ್ಚ್ ರಸ್ತೆಗಳಿಗೆ ಸಂಪರ್ಕ ಕಲಿಸುವ ರಸ್ತೆಯು ಗುಂಡಿಗಳಿಂದ ಆವೃತವಾಗಿ ಸಂಪೂರ್ಣ ಹದಗೆಟ್ಟಿದೆ. ಪ್ರತಿ ಮಳೆಗಾಲದಲ್ಲೂ ರಸ್ತೆಯಲ್ಲಿ ನೀರು ಸಂಗ್ರಹಗೊಂಡು ಕೆರೆಯಂತಾಗುತ್ತಿದ್ದು. ರಸ್ತೆ ಬದಿಯಲ್ಲಿ ಸಂಚರಿಸುವ ಪಾದಚಾರಿಗಳಿಗೂ ತೊಂದರೆಯುಂಟಾಗುತ್ತಿದೆ.
ಸ್ಥಳೀಯ ಪಟ್ಟಣ ಪಂಚಾಯಿತಿ ವತಿಯಿಂದ 2021-22ರ 15ನೇ ಹಣಕಾಸು ಯೋಜನೆಯಡಿ ಉಳಿತಾಯ ಹಣ ₹ 2 ಲಕ್ಷದ ಕಾಮಗಾರಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಖಾಸಗಿ ಜಾಗ ಹಾಗೂ ರಸ್ತೆಯ ಜಾಗದ ವಿಷಯದಲ್ಲಿ ಗೊಂದಲವಿದ್ದು ಕಾಮಗಾರಿಗೆ ಹಿನ್ನೆಡೆಯಾಗಿದೆ. ಖಾಸಗಿ ಜಾಗದ ಮಾಲೀಕರೊಂದಿಗೆ ಸೌಹಾರ್ದ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ಸಾರ್ವಜನಿಕರಿಗೆ ಅನೂಕೂಲವಾಗುವಂತೆ ರಸ್ತೆ ನಿರ್ಮಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಉಳಿದಂತೆ ಮುಖ್ಯರಸ್ತೆಯ ಬ್ಯಾಂಕ್ ಆಫ್ ಬರೋಡಾ ಎದುರು ಹಳೆಯ ಕಾಂಕ್ರಿಟ್ ರಸ್ತೆಗಳಲ್ಲಿ ಅಲ್ಲಲ್ಲಿ ಸಣ್ಣ ಹೊಂಡಗಳು ನಿರ್ಮಾಣವಾಗಿ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಕೆಳಪೇಟೆ ಭಾಗದ ಜನರಿಗೆ ನಾಕಟ್ಟೆ ರಸ್ತೆ ಹೆಚ್ಚು ಉಪಯೋಗವಾಗುತ್ತಿತ್ತು. ಇದೀಗ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಸುತ್ತು ಬಳಸಿ ಹೆದ್ದಾರಿ ಸಂಪರ್ಕಿಸಬೇಕಾಗಿದೆ-ಬಾಬು ಕಸ್ಟಮ್ ರೋಡ್ ಪಡುವರಿ, ಬೈಂದೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.