ADVERTISEMENT

ಡಿ.3 ರಿಂದ ಕುಂದಾಪುರದಲ್ಲಿ ಕಾರ್ಟೂನ್ ಹಬ್ಬ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 5:49 IST
Last Updated 27 ನವೆಂಬರ್ 2021, 5:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕುಂದಾಪುರ:ಈ ಬಾರಿ ಇಲ್ಲಿನ ಕುಂದೇಶ್ವರ ದೇವಸ್ಥಾನದ ದೀಪೋತ್ಸವದ ಸಂಭ್ರಮಾಚರಣೆ ಸಂದರ್ಭದಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಡಿ. 3 ರಿಂದ ಮೂರು ದಿನ ಕಾರ್ಟೂನ್ ಹಬ್ಬ ನಡೆಯಲಿದೆ. ಕಡೂರು ಮಾಜಿ ಶಾಸಕ ವೈ.ಎಸ್.ಬಿ.ದತ್ತ ಕಾರ್ಟೂನ್ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ನಟ ಡಾಲಿ ಧನಂಜಯ, ಹಿರಿಯ ಪತ್ರಕರ್ತ ಜಿ.ಎನ್‌.ಮೋಹನ್ ಪಾಲ್ಗೊಳ್ಳಲಿದ್ದಾರೆ. ಡಿ. 5 ರಂದು ಸಂಜೆ ಸಮಾರೋಪ ನಡೆಯಲಿದೆ ಎಂದು ಸಂಘಟಕರಾದ ಸತೀಶ್ ಆಚಾರ್ಯ ತಿಳಿಸಿದ್ದಾರೆ.

ಕಾರ್ಟೂನ್ ಹಬ್ಬದಲ್ಲಿ ಕಾರ್ಟೂನ್‌ ಪ್ರದರ್ಶನ, ವಿದ್ಯಾರ್ಥಿ ಪೋಷಕರ ಜೊತೆಗೂಡಿ ಕಾರ್ಟೂನ್‍ ರಚನಾ ಸ್ಪರ್ಧೆ, ನಮ್ಮೂರ ಕೋವಿಡ್‌ ವಾರಿಯರ್‌ ಸನ್ಮಾನ, ಕ್ಯಾರಿಕೇಚರ್ ಮೂಲಕ ಬಡ ಶಾಲಾ ಮಕ್ಕಳಿಗೆ ನಿಧಿ ಸಂಗ್ರಹ, ಕಾರ್ಟೂನ್‍ ಹಬ್ಬದ ಕೊನೆ ದಿನ ಕಲಾವಿದ ನಂಜುಂಡಸ್ವಾಮಿ ಅವರ ಮಾಸ್ಟರ್ ಕ್ಲಾಸ್ ನಡೆಯಲಿದೆ. ಕಾರ್ಟೂನ್ ಹಬ್ಬದಲ್ಲಿ ಭಾರತದ ಮುಂದಿನ ಅವಕಾಶಗಳು ಕುರಿತು ಪರಿಣಿತರ ನೋಟ ಹಾಗೂ ಈಚೆಗೆ ನಿಧನರಾದ ನಟ ಪುನೀತ್ ರಾಜ್‌ಕುಮಾರ್‌ ಅವರಿಗೆ ನಮನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ. .

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಯುವ ಸ್ಪರ್ಧೆಯಲ್ಲಿ, ಪೋಷಕರು ಕಾರ್ಟೂನ್ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ಚಿತ್ರಗಳಿಗೆ ಹೊಸ ಆಲೋಚನೆ ನೀಡಲು ಅವಕಾಶವಿದ್ದು, ವಿದ್ಯಾರ್ಥಿಗಳೆ ಚಿತ್ರರಚಿಸಬೇಕು. ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಇರುವುದರಿಂದ, ವಿದ್ಯಾರ್ಥಿಗಳಿಗೆ ಗೊಂದಲ ಆಗಬಾರದು ಎನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪೋಷಕರ ಸಲಹೆ ಪಡೆಯಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳ ಚಿಂತನೆ ಗೆರೆಗಳ ರಚನೆಗೆ 30 ನಿಮಿಷ ಮಾತ್ರ ಅವಕಾಶವಿದೆ. ವಿವಿಧ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗದಲ್ಲಿಯೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಐದು ಜನರಿಗೆ ₹ 1 ಸಾವಿರ ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.