ಉಡುಪಿ: ಜಿಲ್ಲಾ ವ್ಯಾಪ್ತಿಯ ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ದಿಬ್ಬಗಳ ತೆರವು ಹಾಗೂ ಮರಳು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
ಚೆನ್ನೈನ ರಾಷ್ಟ್ರೀಯ ಹಸಿರು ಪೀಠದ ಆದೇಶದ ಹಿನ್ನೆಲೆಯಲ್ಲಿ ಉಡುಪಿ ಹಾಗೂ ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯ 19 ಮರಳು ದಿಬ್ಬಗಳನ್ನು ತೆರವುಗೊಳಿಸಲು ವಿತರಿಸಲಾಗಿದ್ದ 122 ತಾತ್ಕಾಲಿಕ ಮರಳು ಪರವಾನಗಿಗಳನ್ನು ತಡೆ ಹಿಡಿಯಲಾಗಿದೆ. ಮರಳು ದಿಬ್ಬ ತೆರವು ಹಾಗೂ ಸಾಗಣೆಗೆ ನಿರ್ಬಂಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಮರಳು ದಿಬ್ಬಗಳ ತೆರವಿಗೆ ಎಸ್ಇಝೆಡ್ನಿಂದ ನೀಡಲಾಗಿದ್ದ ನಿರಾಕ್ಷೇಪಣಾ ಪತ್ರದ ಅವಧಿ ಆ.22ರವರೆಗೆ ಚಾಲ್ತಿಯಲ್ಲಿದ್ದರೂ ಮರಳು ತೆಗೆಯುವಂತಿಲ್ಲ. ಜಿಲ್ಲಾ 7 ಸದಸ್ಯರ ಸಮಿತಿಯು ಬರೆದ ಪತ್ರದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರುಐಎಲ್ಎಂಎಸ್ ತಂತ್ರಾಂಶದಲ್ಲಿ 122 ಪರವಾನಿಗೆಗಳನ್ನು ತಡೆ ಹಿಡಿದಿದ್ದಾರೆ. ಮರಳು ದಿಬ್ಬಗಳಿಂದ ಮರಳು ತೆರವುಗೊಳಿಸಲು ಬಳಸಲಾಗುತ್ತಿದ್ದ ದೋಣಿಗಳನ್ನು ಹಾಗೂ ಮರಳು ಸಾಗಾಟಕ್ಕೆ ಬಳಸುವ ವಾಹನಗಳನ್ನು ದಕ್ಕೆಯಿಂದ ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.