ADVERTISEMENT

ಮಿಸ್ ವರ್ಲ್ಡ್‌ ಕಿರೀಟ ಮುಡಿಯುವಾಸೆ: ಕರಾವಳಿ ಕುವರಿ ಸಿನಿ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 13:26 IST
Last Updated 19 ಜುಲೈ 2022, 13:26 IST
ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿರುವ ಶೆಟ್ಟಿಗೆ ಹುಟ್ಟೂರು ಉಡುಪಿಯಲ್ಲಿ ಮಂಗಳವಾರ ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಅದ್ಧೂರಿ ಸ್ವಾಗತ ಕೋರಲಾಯಿತು.
ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿರುವ ಶೆಟ್ಟಿಗೆ ಹುಟ್ಟೂರು ಉಡುಪಿಯಲ್ಲಿ ಮಂಗಳವಾರ ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಅದ್ಧೂರಿ ಸ್ವಾಗತ ಕೋರಲಾಯಿತು.   

ಉಡುಪಿ: ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿರುವ ಕರಾವಳಿಯ ಕುವರಿ ಸಿನಿ ಶೆಟ್ಟಿಗೆ ಹುಟ್ಟೂರು ಉಡುಪಿಯಲ್ಲಿ ಮಂಗಳವಾರ ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಅದ್ಧೂರಿ ಸ್ವಾಗತ ಕೋರಲಾಯಿತು.

ಮಿಸ್ ಇಂಡಿಯಾ ಕಿರೀಟ ತೊಟ್ಟು ಕಂಗೊಳಿಸುತ್ತಿದ್ದ ಸಿನಿ ಶೆಟ್ಟಿಯನ್ನು ಸಾರೋಟಿನ ಮೂಲಕ ಜೋಡುಕಟ್ಟೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದವರೆಗೂ ಕರೆತರಲಾಯಿತು. ಚಂಡೆ ವಾದ್ಯ ಮೆರವಣಿಗೆಯ ಅಂದವನ್ನು ಹೆಚ್ಚಿಸಿತ್ತು. ತುಂತುರು ಮಳೆಯ ನಡುವೆಯೂ ದಾರಿಯುದ್ದಕ್ಕೂ ನಿಂತಿದ್ದ ಸಾರ್ವಜನಿಕರು ಊರಿನ ಹುಡುಗಿ ಸಿನಿ ಶೆಟ್ಟಿಗೆ ಶುಭ ಹಾರೈಸಿದರು.

ಎಲ್ಲರತ್ತಲೂ ಕೈಬೀಸುತ್ತ ಸಾಗಿದ ಸಿನಿ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು. ತಂದೆ ಸದಾನಂದ ಶೆಟ್ಟಿ ಹಾಗೂ ತಾಯಿ ಹೇಮಾ ಶೆಟ್ಟಿ ಜತೆಗಿದ್ದರು. ಸಾರೋಟು ಸಮಾರಂಭದ ಅಂಗಳ ತಲುಪುತ್ತಿದ್ದಂತೆ ಅಭಿಮಾನಿಗಳು ಫೋಟೊ ಕ್ಲಿಕ್ಕಿಸಿ, ಸೆಲ್ಫಿ ತೆಗೆದುಕೊಂಡರು.

ADVERTISEMENT

ಬಳಿಕ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಿನಿ ಶೆಟ್ಟಿ ಮಾಧ್ಯಮದವರೊಂದಿಗೆ ಮಾತನಾಡಿ, ಹುಟ್ಟೂರು ಕರಾವಳಿಯಲ್ಲಿ ಸಿಕ್ಕ ಅದ್ಧೂರಿ ಸ್ವಾಗತದಿಂದ ಖುಷಿಯಾಗಿದೆ. ತವರಿನಲ್ಲಿ ಅಜ್ಜಿಯನ್ನು ಭೇಟಿಯಾಗಿದ್ದು ಸಂತಸವನ್ನು ಹೆಚ್ಚಿಸಿದೆ. ನನ್ನ ಸಾಧನೆಯ ಹಿಂದೆ ಅಜ್ಜಿಯ ಸ್ಪೂರ್ತಿ ತುಂಬಿದ ಮಾತುಗಳು ಹಾಗೂ ಪ್ರೇರಣೆ ಇದೆ ಎಂದರು.

ಮಿಸ್ ವರ್ಲ್ಡ್‌ ಸ್ಪರ್ಧೆಗೆ ತಯಾರಾಗುತ್ತಿದ್ದು ಕರಾವಳಿಯ ಜನರ ಪ್ರೀತಿ ಹಾಗೂ ಇಲ್ಲಿನ ದೈವ ದೇವರ ಆಶೀರ್ವಾದ ಬೇಕು ಎಂದರು. ಬಳಿಕ ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಸಿನಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸಂಗೀತ ನಿರ್ದೇಶಕ ಗುರು ಕಿರಣ್ ಮಾತನಾಡಿ, ತುಳುನಾಡಿನ ಕುವರಿ, ಬಂಟ ಸಮಾಜದ ಹುಡುಗಿ ಭಾರತದ ಅತ್ಯಂತ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿರುವುದು ಹೆಮ್ಮೆ ಹಾಗೂ ಸಂತಸದ ವಿಚಾರ ಎಂದರು.

ಮಾಡೆಲಿಂಗ್ ಕ್ಷೇತ್ರದ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಮಿಸ್‌ ಇಂಡಿಯಾ ಸ್ಪರ್ಧೆಯ ಕಠಿಣ ಸುತ್ತುಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸಿನಿ ಶೆಟ್ಟಿ ಸಾಧನೆ ದೊಡ್ಡದು. ತುಳುನಾಡಿನ ದೈವ ದೇವರ ಆಶೀರ್ವಾದದಿಂದ ಸಿನಿ ಶೆಟ್ಟಿ ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.

ಭರತನಾಟ್ಯದಲ್ಲೂ ಪ್ರವೀಣೆಯಾಗಿರುವ ಸಿನಿ ಶೆಟ್ಟಿ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಕರಾವಳಿಯ ನೆಲ ಚಲನ ಚಿತ್ರಕ್ಕೆ ಸಾಕಷ್ಟು ನಟಿಯರನ್ನು ಕೊಟ್ಟಿದೆ. ಅನುಷ್ಕಾ ಶೆಟ್ಟಿ, ಪೂಜಾ ಹೆಗಡೆ, ಶ್ರೀನಿಧಿ ಶೆಟ್ಟಿ, ಐಶ್ವರ್ಯ ರೈ ಅವರಂತಹ ನಟಿಯರ ಸಾಲಿನಲ್ಲಿ ಸಿನಿ ಶೆಟ್ಟಿಯೂ ನಿಲ್ಲಲಿ. ಮಿಸ್ ವರ್ಲ್ಡ್‌ ಕಿರೀಟ ಗೆಲ್ಲಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಮುಖಂಡರಾದ ಜಯರಾಜ ಹೆಗ್ಡೆ, ಶೀಲಾ ಕೆ.ಶೆಟ್ಟಿ, ಬಂಟರ ಸಂಘದ ತಾಲ್ಲೂಕು ಅಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.