ಕುಂದಾಪುರ: ‘ಲಾಕ್ಡೌನ್’ ಹಿನ್ನೆಲೆಯಲ್ಲಿ ಅಹರ್ನಿಶಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ವಲಸೆ ಕಾರ್ಮಿಕರು, ಬಡವರು, ಭಿಕ್ಷುಕರಿಗೆ ನಗರದ ಪಾರಿಜಾತ ಹೋಟೆಲ್ ಊಟೋಪಾಚಾರ ನೀಡುತ್ತಿದ್ದು, ಮಾನವೀಯತೆ ಮೆರೆದಿದೆ.
ಹೋಟೆಲ್ಗಳು ಬಂದ್ ಆಗಿರುವ ಕಾರಣ ಅಹರ್ನಿಶಿ ಕರ್ತವ್ಯ ನಿರತ ಮಂದಿ ಸಂಕಷ್ಟಕ್ಕೆ ಸಿಲುಕಿದ್ದರು. ಅವರಿಗೆ ಉಚಿತವಾಗಿ ಆಹಾರ ಪೂರೈಸಲು ಮುಂದಾದ ಪಾರಿಜಾತ ಹೋಟೇಲ್ನ ಪಿ.ರಾಮಚಂದ್ರ ಭಟ್ ಹಾಗೂ ಗಣೇಶ್ ಭಟ್ ಸ್ವಯಂ ಸೇವಕರನ್ನು ಒಳಗೊಂಡ 5 ವಾಹನಗಳನ್ನು ಸಜ್ಜುಗೊಳಿಸಿದ್ದಾರೆ.
ಕುಂದಾಪುರ ನಗರ, ಗಂಗೊಳ್ಳಿ–ಶಿರೂರು, ವಂಡ್ಸೆ–ಕೊಲ್ಲೂರು, ಬಸ್ರೂರು–ಕಂಡ್ಲೂರು–ಸಿದ್ದಾಪುರ ಹಾಗೂ ಕೋಟೇಶ್ವರ–ಹಾಲಾಡಿ–ಶಂಕರನಾರಾಯಣ ಮಾರ್ಗಗಳಲ್ಲಿ ಈ ವಾಹನಗಳ ಮೂಲಕ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ.
ಫಲಹಾರ, ಊಟ, ಹಣ್ಣು, ಬಿಸ್ಕಿಟ್ ಹಾಗೂ ಚಾ, ಕಾಫಿ ವ್ಯವಸ್ಥೆ ಮಾಡುತ್ತಿದ್ದಾರೆ. ದಾರಿಯಲ್ಲಿ ಸಿಗುವ ಭಿಕ್ಷುಕರು ಹಾಗೂ ಹಸಿದವರಿಗೆ ಆಹಾರ ನೀಡುತ್ತಿದ್ದು, ಸಾಮಾಜಿಕ ಶ್ಲಾಘನೆ ವ್ಯಕ್ತವಾಗಿದೆ.
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಗಣೇಶ್ ಭಟ್, ‘ದೇಶ ಇಂದು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಇದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜೀವದ ಹಂಗು ತೊರೆದು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇದ್ದರೂ, ಊಟೋಪಚಾರದ ಮೂಲಕ ಅಳಿಲು ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಲಾಕ್ಡೌನ್ ಇರುವ ತನಕ ಮುಂದುವರಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹೆಚ್ಚಿನ ಮಾಹಿತಿಗಾಗಿ (ಮೊ.9483870705 ಅಥವಾ 7348970704) ಸಂಪರ್ಕಿಸಬಹುದು.
ಸಿಟಿ ಜೆಸಿಐ ಸ್ಪಂದನೆ
ಇಲ್ಲಿನ ಸಿಟಿ ಜೆಸಿಐ ಸಂಸ್ಥೆಯೂ ಉಚಿತ ಊಟ ವಿತರಣೆಯ ಕಾರ್ಯಕ್ಕೆ ಮುಂದಾಗಿರುವ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಹೇಳಿಕೊಂಡಿದೆ. ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸಲು ಸಿಟಿ ಜೆಸಿಐ ಸಂಸ್ಥೆಯ ಅಧ್ಯಕ್ಷ ನಾಗೇಶ್ ನಾವಡ ( 9886761747), ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ (9448724800), ಮಾಜಿ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ ( 9845224539), ಮಂಜುನಾಥ ಕಾಮತ್ (7349000157), ದಿನೇಶ್ ಕುಂದರ್ ( 9844995149) ಹಾಗೂ ದಿನೇಶ್ ಪುತ್ರನ್ ( 9008067963 ) ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.