ಉಡುಪಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಭ್ರೂಣ ಶಿಶು ಔಷಧ ವಿಭಾಗ ಮತ್ತು ಹಿರಿಯ ನಾಗರಿಕರ ಚಿಕಿತ್ಸಾಲಯ ವಿಭಾಗವನ್ನು ಮಣಿಪಾಲ ಆಸ್ಪತ್ರೆಗಳ ಪ್ರಚಾರ ರಾಯಭಾರಿಯಾಗಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಂಗಳವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ರಾಹುಲ್ ದ್ರಾವಿಡ್ ಅವರು, ಭ್ರೂಣದ ಔಷಧ ಮತ್ತು ಹಿರಿಯ ನಾಗರಿಕರ ಚಿಕಿತ್ಸಾಲಯವು ವೈದ್ಯಕೀಯ ವಿಜ್ಞಾನದಲ್ಲಿ ಒಂದು ಪ್ರಗತಿಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಮಣಿಪಾಲಕ್ಕೆ ಭೇಟಿ ನೀಡಿರುವುದು ನನಗೆ ತುಂಬಾ ಖುಷಿಯಾಗಿದೆ. ಮಣಿಪಾಲ ಸಮೂಹವು ತನ್ನ ಸಂಶೋಧನಾ ಚಟುವಟಿಕೆಗಳಿಗೆ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರದ ಪ್ರಗತಿಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಮಣಿಪಾಲ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ, ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭ್ರೂಣ ಮಟ್ಟದಿಂದ ಹಿಡಿದು ಎಲ್ಲ ವಯೋಮಾನದವರಿಗೆ ಮಣಿಪಾಲದಲ್ಲಿ ಎಲ್ಲಾ ರೀತಿಯ ಸೌಕರ್ಯಗಳು ಲಭ್ಯವಿವೆ. ಈಗ ಇದಕ್ಕೆ ಈ ಎರಡು ಸೇವೆಗಳು ಸೇರ್ಪಡೆಯಾಗಿದ್ದು, ಇದು ನಮ್ಮ ಪರಿಣಿತ ವೈದ್ಯಕೀಯ ತಜ್ಞರೊಂದಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಕಡೆಗೆ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾಧ್ಯಾಪಕ ಹಾಗೂ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ. ಮಂಜುನಾಥ ಹಂದೆ ‘ಸಮಗ್ರ ಹಿರಿಯ ನಾಗರಿಕರ ಚಿಕಿತ್ಸಾಲಯ’ ಹಾಗೂ ಸ್ತ್ರೀರೋಗ ವಿಭಾಗದ ಘಟಕ ಮುಖ್ಯಸ್ಥ ಡಾ. ಅಖಿಲ ವಾಸುದೇವ ಅವರು ಭ್ರೂಣ ಔಷಧ ವಿಭಾಗದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ನಿರ್ವಹಣಾಧಿಕಾರಿ ಸಿ. ಜಿ. ಮುತ್ತಣ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.