ADVERTISEMENT

ರಾಜ್ಯ ಕಂಬಳ ಸಮಿತಿ ಪಟ್ಟಿಗೆ ಆಕ್ಷೇಪ

kambala issue

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 15:30 IST
Last Updated 4 ಜುಲೈ 2022, 15:30 IST
ಕಂಬಳ ಸಮಿತಿಯ ಆಜೀವ ಸದಸ್ಯರು ಸೋಮವಾರ ಸುದ್ದಿಗೋಷ್ಠಿ ನಡೆಸಿದರು.
ಕಂಬಳ ಸಮಿತಿಯ ಆಜೀವ ಸದಸ್ಯರು ಸೋಮವಾರ ಸುದ್ದಿಗೋಷ್ಠಿ ನಡೆಸಿದರು.   

ಉಡುಪಿ: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಕಂಬಳ ಸಮಿತಿಯ ಹಾಗೂ ಆಜೀವ ಸದಸ್ಯರ ಅನುಮತಿ ಪಡೆಯದೆ ರಚಿಸಲಾಗಿರುವ ರಾಜ್ಯ ಕಂಬಳ ಸಮಿತಿ ಪಟ್ಟಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಕಂಬಳ ಸಮಿತಿಯ ಆಜೀವ ಸದಸ್ಯ ಲೋಕೇಶ್ ಶೆಟ್ಟಿ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಸ್ತಿತ್ವದಲ್ಲಿ ಇಲ್ಲದ ಜಿಲ್ಲಾ ಕಂಬಳ ಸಮಿತಿಯ ಕೆಲವು ಪದಾಧಿಕಾರಿಗಳು ರಾಜ್ಯ ಕಂಬಳ ಸಮಿತಿ ಪಟ್ಟಿ ಸಿದ್ಧಪಡಿಸಿದ್ದಾರೆ. ಉಡುಪಿ, ಕುಂದಾಪುರ ಹಾಗೂ ಬೈಂದೂರು ಕಂಬಳ ಸಮಿತಿಗಳು ಹಾಗೂ ಕಂಬಳ ಆಯೋಜಕರು ಹಾಗೂ ಕೋಣಗಳ ಮಾಲೀಕರಿಂದ ಪಟ್ಟಿಗೆ ವಿರೋಧವಿದೆ.ರಾಜ್ಯ ಸರ್ಕಾರ ಮೂರು ಜಿಲ್ಲೆಗಳ ಕಂಬಳಕ್ಕೆ ಸಂಬಂಧ ಚರ್ಚಿಸಿ ಹೊಸ ಪಟ್ಟಿ ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಕಂಬಳ ಸಮಿತಿ ರಚನೆಗೆ ಸರ್ಕಾರ ಸುತ್ತೋಲೆ ಹೊರಡಿಸುತ್ತಿದ್ದಂತೆ 19 ಮಂದಿಯ ಹೆಸರು ಸೇರಿಸಿ, ಗುಣಪಾಲ ಕಡಂಬ ಎಂಬುವರನ್ನು ಅಧ್ಯಕ್ಷರನ್ನಾಗಿ ಘೋಷಿಸಿ ಪಟ್ಟಿ ಕಳಿಸಲಾಗಿದೆ. ಸರ್ಕಾರ ಮೂರು ಜಿಲ್ಲೆಗಳ ಕಂಬಳ ಸಮಿತಿಯ ಆಯೋಜಕರು, ಕೋಣಗಳ ಮಾಲೀಕರು, ಕಂಬಳ ಆಯೋಜಕರು ಹಾಗೂ ಕಂಬಳ ಅಭಿಮಾನಿಗಳ ಸಭೆ ಕರೆದು ಚರ್ಚಿಸಿ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

ADVERTISEMENT

1999–2000ದಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕಂಬಳ ಸಮಿತಿ ರಚಿಸಲಾಗಿದ್ದು ಉಡುಪಿಯಲ್ಲಿ ನೋಂದಣಿಯಾಗಿದೆ. ಸಮಿತಿಯು ಕಂಬಳಕ್ಕೆ ಕೆಲವು ನಿಯಮ ಕಟ್ಟುಪಾಡುಗಳನ್ನು ಹಾಕಿದೆ. ಕಳೆದ ವರ್ಷ ಕೆಲವರು ಒಟ್ಟಾಗಿ ಹೊಸ ಸಮಿತಿ ರಚಿಸಿಕೊಂಡಿದ್ದಾರೆ ಎಂದು ಲೋಕೇಶ್ ಶೆಟ್ಟಿ ದೂರಿದರು.

ಸಮಿತಿಯ ರಚನೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು, ಕೋರ್ಟ್‌ ಸಮಿತಿ ರಚನೆ ತಡೆ ಹಿಡಿದಿದ್ದರೂ ರಾಜ್ಯ ಕಂಬಳ ಸಮಿತಿ ಪಟ್ಟಿ ಸಿದ್ಧಪಡಿಸಿ ಸಲ್ಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರಾವಳಿಯಲ್ಲಿ ಪ್ರಸ್ತುತ 19 ಸ್ಪರ್ಧಾ ಕಂಬಳಗಳು ನಡೆಯುತ್ತಿದ್ದು ದಕ್ಷಿಣ ಕನ್ನಡದಲ್ಲಿ 14 ಹಾಗೂ ಉಡುಪಿ ಜಿಲ್ಲೆಯಲ್ಲಿ 5 ಕಂಬಗಗಳು ನಡೆಯುತ್ತವೆ. ಇದಲ್ಲದೆ ದೇವರ ಹೆಸರಿನಲ್ಲಿ ಹಲವು ಕಂಬಗಳು ನಡೆಯುತ್ತಿವೆ. ಬ್ರಹ್ಮಾವರ, ಕುಂದಾಪುರ, ಬೈಂದೂರಿನಲ್ಲಿ ಹೆಚ್ಚು ದೇವರ ಕಂಬಳಗಳು ನಡೆಯುತ್ತವೆ. ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಇಲ್ಲದೆ ಕಂಬಳಗಳು ನಡೆಯುತ್ತಿವೆ ಎಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಸುಧಾಕರ ಹೆಗ್ಡೆ ತಿಳಿಸಿದರು.‌

ಸುದ್ದಿಗೋಷ್ಠಿಯಲ್ಲಿ ವೆಂಕಟಪೂಜಾರಿ, ಪ್ರಮೋದ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.