ಕಾರ್ಕಳ: ಸ್ವರ್ಣ ಕಾರ್ಕಳದ ಭಾಗವಾಗಿ ಕಾರ್ಕಳದಲ್ಲಿ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಸೋಮವಾರ ಭುವನೇಂದ್ರ ಕಾಲೇಜು ಹಾಗೂ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ ಪಂಜಿನ ಕವಾಯತಿನಲ್ಲಿ ಮಾತನಾಡಿದ ಅವರು ಬೆಂಗಳೂರು ಮತ್ತು ಮೈಸೂರಿಗೆ ಸೀಮಿತವಾಗಿದ್ದ ಪೊಲೀಸ್ ಬ್ಯಾಂಡ್ ಮತ್ತು ಪಂಜಿನ ಕವಾಯತು ಕಾರ್ಕಳದಲ್ಲಿ ಆಯೋ ಜಿಸುವ ಮೂಲಕ ತಾಲ್ಲೂಕಿಗೆ ಹಿರಿಮೆ ನೀಡುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಗೇರು ನಿಗಮದ ಅಧ್ಯಕ್ಷ ಬಿ. ಮಣಿರಾಜ್ ಶೆಟ್ಟಿ, ಪುರಸಭಾಧ್ಯಕ್ಷೆ ಸುಮಾ ಕೇಶವ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಕುದುರೆಮುಖ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಮತ್ತಿತರರು ಪಾಲ್ಗೊಂಡಿದ್ದರು.
ಶ್ವಾನ ದಳದ ಶ್ವಾನಗಳಿಂದ ಸಾಹಸ ಪ್ರದರ್ಶನ ನಡೆಯಿತು. ಬಾಂಬ್ ಪತ್ತೆ, ಅಪರಾಧ ಪತ್ತೆ, ದರೋಡೆಕೋರರ ಪತ್ತೆ, ವಸ್ತುಗಳ ರಕ್ಷಣೆ, ಗುಂಪು ವಿಧೇಯತೆ ಪ್ರದರ್ಶನ, ರಿಂಗ್ ಜಂಪ್, ಹರ್ಡಲ್ ಜಂಪ್ ಗಮನ ಸೆಳೆಯಿತು. ಐಕಾನ್, ಕ್ಯಾಪ್ಟನ್, ಬ್ರೊನಿ, ಸ್ನಿಪೆರ್ ಹೆಸರಿನ ಶ್ವಾನಗಳು ಭಾಗವಹಿಸಿದ್ದವು. ಎಸ್ಪಿ ಹಾಕೆ ಅಕ್ಷಯ್ ಮಚ್ಚೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.