ಕುಂದಾಪುರ: ಜುಲೈ 23ರಂದು ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದ ಸುರೇಶ(28) ಎಂಬುವರ ಮೃತದೇಹ ಶನಿವಾರ ಸಂಜೆ ಜಡ್ಕಲ್ ಗ್ರಾಮದ ಕಾನ್ಕಿ ಹಾಸ್ಕಲ್ ಪಾರೆ ಎಂಬಲ್ಲಿನ ತೋಟವೊಂದರ ನಡುವೆ ಹರಿಯುವ ಮೆಕ್ಕೆಹೊಳೆಯಲ್ಲಿ ಪತ್ತೆಯಾಗಿದೆ.
ಸುರೇಶ್ ಜುಲೈ 22ರಂದು ಜಡ್ಕಲ್ ಗ್ರಾಮದ ಮಕ್ಕೆಯ ಕೊಳಕೆಹೊಳೆಯ ತನ್ನ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಊಟ ಮಾಡಿ ಮಲಗಿದ್ದು, ಮರುದಿನ ಬೆಳಿಗ್ಗೆ ನಾಪತ್ತೆಯಾಗಿದ್ದರು.
ಮನೆಯಿಂದ ಬಹಿರ್ದೆಸೆಗೆ ಹೋದ ಸಂದರ್ಭ ವಿಪರೀತ ಮಳೆ ಸುರಿಯುತ್ತಿದ್ದುದರಿಂದ ತುಂಬಿ ಹರಿಯುವ ಹೊಳೆಗೆ ಬಿದ್ದು ಕೊಚ್ಚಿ ಹೋಗಿ ಮೃತ ಪಟ್ಟಿರಬಹುದೆಂದು ಶಂಕಿಸಲಾಗಿದೆ.
ಶುಕ್ರವಾರ ಸಂಜೆಯಿಂದ ಮಳೆಯ ಆರ್ಭಟ ಕಡಿಮೆಯಾಗಿದ್ದರಿಂದ ನದಿಯಲ್ಲಿನ ನೀರಿನ ಮಟ್ಟ ಕಡಿಮೆಯಾಗಿದ್ದರಿಂದ ಮೃತ ಸ್ಥಿತಿಯಲ್ಲಿ ಸುರೇಶ್ ಅವರ ದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ. ಕೊಲ್ಲೂರು ಠಾಣೆ ಉಪನಿರೀಕ್ಷಕಿ ಜಯಶ್ರೀ ಹುನ್ನೂರು, ಸುಧಾರಾಣಿ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.