ADVERTISEMENT

ಕೋಟ: ‘ಭಾಷೆಯ ಬೆಳವಣಿಗೆ ಸಂಸ್ಕೃತಿ ಅನಾವರಣಕ್ಕೆ ಬುನಾದಿ’

ಕೋಟ ಕಾರಂತ ಥೀಂ ಪಾರ್ಕ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗರಾಜ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 4:58 IST
Last Updated 1 ಫೆಬ್ರುವರಿ 2023, 4:58 IST
ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆದ ‘ಆಹ್ಲಾದ’ ಕಾರ್ಯಕ್ರಮದಲ್ಲಿ ರಂಗಕರ್ಮಿ ನಾಗರಾಜ್ ತೆಕ್ಕಟ್ಟೆ ಅವರಿಗೆ ದಿ.ಮಂಜುನಾಥ ಕೋಟ ಸ್ಮಾರಕ ದತ್ತಿ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆದ ‘ಆಹ್ಲಾದ’ ಕಾರ್ಯಕ್ರಮದಲ್ಲಿ ರಂಗಕರ್ಮಿ ನಾಗರಾಜ್ ತೆಕ್ಕಟ್ಟೆ ಅವರಿಗೆ ದಿ.ಮಂಜುನಾಥ ಕೋಟ ಸ್ಮಾರಕ ದತ್ತಿ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಕೋಟ (ಬ್ರಹ್ಮಾವರ): ‘ನಾವಾಡುವ ಭಾಷೆ ನಮ್ಮ ಸಂಸ್ಕೃತಿ ಭಾಗವೇ ಆಗಿರುತ್ತದೆ. ಭಾಷೆಯ ಬಗ್ಗೆ ಕೀಳರಿಮೆ ತೋರಿಸದೆ, ಉಪಯೋಗಿಸಿದಷ್ಟು ಸಮೃದ್ಧವಾಗಿ ಬೆಳೆಯುತ್ತದೆ. ಕುಂದಾಪ್ರ ಭಾಷೆ ತನ್ನದೇ ಸ್ಥಾನಮಾನ ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ
ವಿಶೇಷ ಖ್ಯಾತಿ ಹೊಂದಿರುವುದು ಹೆಮ್ಮೆಯ ವಿಷಯ’ ಎಂದು
ರಂಗಕರ್ಮಿ ನಾಗರಾಜ್ ತೆಕ್ಕಟ್ಟೆ ಹೇಳಿದರು.

ಕೋಟ ಡಾ.ಶಿವರಾಮ ಕಾರಂತ ಪ್ರತಿಷ್ಠಾನ, ಉಡುಪಿಯ ಡಾ. ಶಿವರಾಮ ಕಾರಂತ ಟ್ರಸ್ಟ್, ಕೋಟತಟ್ಟು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆದ ವಿಚಾರ ಸಂಕಿರಣ, ದತ್ತಿ ಪುರಸ್ಕಾರ, ನಾಟಕ ಪ್ರದರ್ಶನ ‘ಆಹ್ಲಾದ’ ಕಾರ್ಯಕ್ರಮದಲ್ಲಿ ದಿ. ಮಂಜುನಾಥ ಕೋಟ ಸ್ಮಾರಕ ದತ್ತಿ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೋಟದ ಉದ್ಯಮಿ ಇಬ್ರಾಹೀಂ ಸಾಹೇಬ್‌, ‘ಸಾಂಸ್ಕೃತಿಕ ಸಾಹಿತ್ಯಿಕ ಕಾರ್ಯಕ್ರಮಗಳ
ಮೂಲಕ ಮನೆಮಾತಾಗಿರುವ ಕಾರಂತ ಥೀಂ ಪಾರ್ಕ್, ದತ್ತಿ
ಪುರಸ್ಕಾರದ ಮೂಲಕ ಸಾಧಕರನ್ನು ಮುಖ್ಯವಾಹಿನಿಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ’ ಎಂದರು.

ADVERTISEMENT

ಸಾಂಸ್ಕೃತಿಕ ಚಿಂತಕ ಪ್ರಭಾಕರ ಕುಂದರ, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ಶ್ರೀವಾಸು ಪೂಜಾರಿ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ,
ರಂಗಕರ್ಮಿ ಬಿ.ಎಸ್ ರಾಮ್ ಶೆಟ್ಟಿ ಹಾರಾಡಿ ಇದ್ದರು.

ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು.

ನಂತರ ಉಡುಪಿ ಜಿಲ್ಲಾ ಶಿಕ್ಷಕರ ಬಳಗ ಅಭಿನಯಿಸಿರುವ ಬರ್ಬರಿಕ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.