ಉಡುಪಿ: ಕರಾವಳಿಯಲ್ಲಿ ಏಪ್ರಿಲ್ ಹಾಗೂ ಮೇನಲ್ಲಿ ರಾತ್ರಿಯ ಹೊತ್ತು ದೈವ ಕೋಲ, ನಾಗಾರಾಧನೆ ಹಾಗೂ ಯಕ್ಷಗಾನ ಚಟುವಟಿಕೆಗಳು ಹೆಚ್ಚಾಗಿ ನಡೆಯುವುದರಿಂದ ಕೊರೊನಾ ಕರ್ಫ್ಯೂ ಜಾರಿಯಾದರೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲಿದೆ. ಉಡುಪಿ ಹಾಗೂ ಮಣಿಪಾಲ ನಗರಗಳಲ್ಲಿ ಕರ್ಫ್ಯೂ ರದ್ದುಪಡಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಲಾಕ್ಡೌನ್ ಕಾರಣದಿಂದ ಧಾರ್ಮಿಕ ಆಚರಣೆಗಳು ನಡೆಯಲಿಲ್ಲ. ಈಗ ಕರ್ಫ್ಯೂ ಜಾರಿಯಾದರೆ ಆಚರಣೆಗಳಿಗೆ ಮತ್ತೆ ಅಡ್ಡಿಯಾಗುತ್ತದೆ. ದೈವದ ಕೋಲ ನಡೆಸಲು ಈಗಾಗಲೇ ಹಲವರು ಮುಂಗಡ ಕೊಟ್ಟುಕಾಯ್ದಿರಿಸಿದ್ದಾರೆ. ಜನರಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಬಾರದು ಎಂದು ಶಾಸಕರು ಆಗ್ರಹಿಸಿದ್ದಾರೆ.
ಉಡುಪಿ ಹಾಗೂ ಮಣಿಪಾಲದಲ್ಲಿ ಕೊರೊನಾ ಆಂತಕವಿಲ್ಲ. ಕಂಟೈನ್ಮೆಂಟ್ ವಲಯವಾಗಿದ್ದ ಎಂಐಟಿಯಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗಿದೆ. ಜಿಲ್ಲೆಯಲ್ಲಿ 401 ಸಕ್ರಿಯ ಸೋಂಕಿತರು ಮಾತ್ರ ಇದ್ದಾರೆ. ಪ್ರತಿದಿನ ಸರಾಸರಿ 2,500 ಕೋವಿಡ್ ಪರೀಕ್ಷೆಗಳು ನಡೆಯುತ್ತಿದ್ದು ಶೇ 2.5ರಷ್ಟು ಮಾತ್ರ ಪಾಸಿಟಿವಿಟಿ ದರ ಬರುತ್ತಿದೆ.ಆರ್ಥಿಕ ಸಂಕಷ್ಟದಿಂದ ಜನರು ಸುಧಾರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಅನವಶ್ಯಕ ರಾತ್ರಿ ಕರ್ಫ್ಯೂ ಬೇಡ ಎಂದು ಶಾಸಕ ರಘುಪತಿ ಭಟ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.