ADVERTISEMENT

ಉಡುಪಿ: ಕಣ್ಮನ ಸೆಳೆದ ‘ನಾರಸಿಂಹ’ ನೃತ್ಯ ರೂಪಕ

ಮುದ್ದಣ್ಣ ಮಂಟಪದಲ್ಲಿ ನೃತ್ಯ ನಿಕೇತನ ಕೊಡವೂರು ಸಂಸ್ಥೆಯಿಂದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 10:16 IST
Last Updated 11 ಫೆಬ್ರುವರಿ 2020, 10:16 IST
ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಸೋಮವಾರ ಸಂಜೆ ನೃತ್ಯ ನಿಕೇತನ ಕೊಡವೂರು ತಂಡ ಪ್ರದರ್ಶಿಸಿದ ‘ನಾರಸಿಂಹ’ ನೃತ್ಯ ರೂಪಕ.
ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಸೋಮವಾರ ಸಂಜೆ ನೃತ್ಯ ನಿಕೇತನ ಕೊಡವೂರು ತಂಡ ಪ್ರದರ್ಶಿಸಿದ ‘ನಾರಸಿಂಹ’ ನೃತ್ಯ ರೂಪಕ.   

ಉಡುಪಿ: ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಸೋಮವಾರ ಸಂಜೆ ನೃತ್ಯ ನಿಕೇತನ ಕೊಡವೂರು ತಂಡ ಪ್ರದರ್ಶಿಸಿದ ‘ನಾರಸಿಂಹ’ ನೃತ್ಯ ರೂಪಕ ನೆರೆದಿದ್ದವರ ಕಣ್ಮನ ಸೆಳೆಯಿತು.

ವರಾಹ ಅವತಾರದಲ್ಲಿ ಬರುವ ವಿಷ್ಣು ಹಿರಣ್ಯಾಕ್ಷನ ವಧಿಸುವ ಪ್ರಸಂಗ, ಉಗ್ರ ನರಸಿಂಹನ ಅವತಾರ, ಹಿರಣ್ಯಕ ಶಿಪುವಿನ ಸಂಹಾರ, ಹೀಗೆ ನಾರಸಿಂಹ ರೂಪಕದ ಹಲವು ಪ್ರಸಂಗಳು ಮನೋಜ್ಞವಾಗಿ ಮೂಡಿಬಂದವು.

ಪ್ರತಿಯೊಂದು ಸನ್ನಿವೇಶವನ್ನೂ ಕಲಾವಿದರು ಅಚ್ಚುಕಟ್ಟಾಗಿ ತೆರೆಯ ಮೇಲೆ ಪ್ರಸ್ತುತ ಪಡಿಸಿದರು. ವಿದುಷಿ, ಮಾನಸಿ ಸುಧೀರ್‌, ವಿದುಷಿ ಅನಘಶ್ರೀ ನೃತ್ಯ ಸಾಂಗತ್ಯ ಅದ್ಭುತವಾಗಿತ್ತು. ವಿದ್ವಾನ್ ಸುಧೀರ್ ರಾವ್ ಕೊಡವೂರ ಅವರ ಪ್ರದರ್ಶನ ಗಮನ ಸೆಳೆಯಿತು.

ADVERTISEMENT

ಪ್ರಯೋಗ ಅನಾವರಣ ಮಾಡಿ ಮಾತನಾಡಿದ ಆಳ್ವಾಸ್‌ ಎಜುಕೇಷನ್‌ ಫೌಂಡೇಷನ್‌ ಅಧ್ಯಕ್ಷ ಡಾ.ಮೋಹನ್ ಆಳ್ವ ‘ಭರತನಾಟ್ಯವನ್ನು ಕೇಂದ್ರವಾಗಿಟ್ಟುಕೊಂಡು ಶಾಸ್ತ್ರೀಯ ನೃತ್ಯದ ಎಲ್ಲ ಪ್ರಾಕಾರಗಳ ಬೆಳವಣಿಗೆಗೆ ಶ್ರಮಿಸುತ್ತಿರುವ ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೃಜನ ಶೀಲತೆ ನಿರಂತರವಾಗಿರಬೇಕು. ಹೊಸ ಆವಿಷ್ಕಾರಗಳು ಮೂಡಿಬರಬೇಕು. ಕಲ್ಪನೆ, ಸೃಷ್ಟಿ, ಯೋಜನೆ, ವಿಶಾಲವಾದ ಮನೋಧರ್ಮಗಳು ಸಾಂಸ್ಕೃತಿಕ ಲೋಕದ ಸಂಪತ್ತಿದ್ದಂತೆ. ಮೂಲತನಕ್ಕೆ ತೊಂದರೆಯಾಗದಂತೆ ಹೊಸ ಪ್ರಯೋಗಗಳು ನಡೆಬೇಕಿದೆ ಎಂದರು.

ನೃತ್ಯನಿಕೇತನ ಕೊಡವೂರು ಸಂಸ್ಥೆ 30 ವರ್ಷಗಳಿಂದ ನಿರಂತರ ಕಲಾಸೇವೆಯಲ್ಲಿ ತೊಡಗಿದೆ. ಸಂಸ್ಥೆಯ ಕಾರ್ಯ ನಿರಂತರವಾಗಿ ಮುಂದುವರಿಯಲಿ.ಸಂಸ್ಥೆಯ ಕಾರ್ಯಕ್ರಮಗಳಿಗೆ ಆಳ್ವಾಸ್‌ನ ವೇದಿಕೆ ಒದಗಿಸಲಿದೆ ಎಂದು ಮೋಹನ್ ಆಳ್ವ ಆಶಿಸಿದರು.

ನಾರಸಿಂಹ ನೃತ್ಯ ರೂಪಕದ ರಚನೆಯನ್ನು ಸುಧಾ ಆಡುಕಳ ನಿರ್ವಹಿಸಿದರೆ, ವಿನ್ಯಾಸ, ಸಂಗೀತ ನಿರ್ದೇಶನ ಡಾ.ಶ್ರೀಪಾದ್ ಭಟ್‌, ರಂಗಸಜ್ಜಿಕೆ ವಸ್ತ್ರವಿನ್ಯಾಸ ರಾಜು ಮಣಿಪಾಲ, ಪ್ರಶಾಂತ ಉದ್ಯಾವರ, ಗೋಪಿನಾಥ್ ಆಚಾರ್ಯ, ವಿದ್ವಾನ್ ಸುಧೀರ್ ರಾವ್ ಕೊಡವೂರುಸಂಚಾಲಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.