
ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳಿಗೆ ಜಯಪ್ರಕಾಶ ಹೆಗ್ಡೆ ಚಾಲನೆ ನೀಡಿದರು
ಬ್ರಹ್ಮಾವರ: ‘ಸರ್ಕಾರ ನೀಡುವ ಅನುದಾನದ ಮೇಲೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಹೆಚ್ಚು ಬೇಡಿಕೆ ಇಟ್ಟಾಗ ಮಾತ್ರ ಅನುದಾನ ಸಿಗಲು ಸಾಧ್ಯ’ ಎಂದು ಮುಖಂಡ ಜಯಪ್ರಕಾಶ ಹೆಗ್ಡೆ ಹೇಳಿದರು.
ಅವರು ಶನಿವಾರ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಹಿಂದೆ ಪಟ್ಟಣ ಪಂಚಾಯಿತಿಯ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಅಭಿವೃದ್ಧಿಯತ್ತ ಪಂಚಾಯಿತಿ ಸಾಗಿದ್ದನ್ನು ಮೆಲುಕು ಹಾಕಿದರು. ಪ್ಲಾಸ್ಟಿಕ್ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯದಂತೆ ಸಾರ್ವಜನಿಕರಿಗೆ ಹೇಳಿದರು.
ಪಟ್ಟಣ ಪಂಚಾಯಿತಿಯ ‘ಸುವರ್ಣ ಪಥ’ ಮುಖಪುಟ ಬಿಡುಗಡೆಗೊಳಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಪಟ್ಟಣ ಪಂಚಾಯಿತಿ ಅಭಿವೃದ್ಧಿ ಹೊಂದಬೇಕಾದರೆ ಸರ್ಕಾರದ ಅನುದಾನದ ಮೇಲೆ ಅವಲಂಬಿತವಾಗಿರುತ್ತದೆ. ಇಂದು ಅನುದಾನದ ಕೊರತೆ ಎದುರಿಸುತ್ತಿದ್ದೇವೆ. ಪಟ್ಟಣ ಪಂಚಾಯಿತಿಯು ಸುವರ್ಣ ಮಹೋತ್ಸವದ ಅಂಗವಾಗಿ ಒಂದಿಷ್ಟು ಯೋಜನೆ ಯೋಚನೆಗಳನ್ನಿರಿಸಿ, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ಹೊಸಭಾಷ್ಯ ಬರೆದಿದೆ ಎಂದು ಹೇಳಿದರು.
ಸಾಧಕರಾದ ಕೆ. ತಾರಾನಾಥ ಹೊಳ್ಳ, ನಾರಾಯಣ ಆಚಾರ್, ಪಿ. ನರಸಿಂಹ ಐತಾಳ, ಗುಂಡ್ಮಿ ರಾಮಚಂದ್ರ ಐತಾಳ, ಪದ್ಮನಾಭ ಶೆಟ್ಟಿಗಾರ್, ಡಾ.ಹರೀಶ, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ, ಬಿಜೆಪಿ ಮುಖಂಡ ಪ್ರಮೋದ ಮಧ್ವರಾಜ್, ತಹಶೀಲ್ದಾರ್ ಶ್ರೀಕಾಂತ ಎಸ್. ಹೆಗ್ಡೆ, ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ ಸಿ. ಕುಂದರ್, ಕಾಂಗ್ರೆಸ್ ಮುಖಂಡ ದಿನೇಶ ಹೆಗ್ಡೆ ಮೊಳಹಳ್ಳಿ, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಸಾಹಿತಿ ಎ.ಎಸ್.ಎನ್.ಹೆಬ್ಬಾರ್ ಕುಂದಾಪುರ, ಪಟ್ಟಣ ಪಂಚಾಯಿತಿ ವಿರೋಧ ಪಕ್ಷದ ನಾಯಕ ಶ್ರೀನಿವಾಸ ಅಮೀನ್, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸದಸ್ಯರಾದ ರವೀಂದ್ರ ಕಾಮತ್, ಶ್ಯಾಮಸುಂದರ ನಾಯರಿ, ಸುಲತಾ ಎಸ್. ಹೆಗ್ಡೆ, ರೇಖಾ ಕೆ. ಕರ್ಕೇರ, ಪುನೀತ್ ಪೂಜಾರಿ, ಗಣೇಶ ಕಾರ್ಕಡ, ಭಾಸ್ಕರ ಬಂಗೇರ, ಅನುಸೂಯ ಹೇರ್ಳೆ, ಸಂಜೀವ ದೇವಾಡಿಗ ಭಾಗವಹಿಸಿದ್ದರು. ಪಂಚಾಯಿತಿ ಸದಸ್ಯ ರಾಜು ಪೂಜಾರಿ ಸ್ವಾಗತಿಸಿದರು. ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಮುಖ್ಯಶಿಕ್ಷಕ ಗಣೇಶ ಜಿ. ನಿರೂಪಿಸಿದರು.
ಅಭಿವೃದ್ಧಿ ಕಾರ್ಯ ಲೋಕಾರ್ಪಣೆ
ಸುವರ್ಣ ಮಹೋತ್ಸವದ ಅಂಗವಾಗಿ ಪಾರಂಪಳ್ಳಿ ವಿಷ್ಣುಮೂರ್ತಿ ವಾರ್ಡ್ನಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಘನ ತ್ಯಾಜ್ಯ ಘಟಕ, ಎಂಆರ್ಎಂ ಘಟಕವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆಗೊಳಿಸಿದರು. ಪಟ್ಟಣ ಪಂಚಾಯಿತಿ ಮುಂಭಾಗ ನಿರ್ಮಾಣಗೊಂಡ ಸಾಹಿತಿ ಡಾ.ಕೋಟ ಶಿವರಾಮ ಕಾರಂತ, ಭಾಗವತ ದಿ.ಕಾಳಿಂಗ ನಾವಡ, ಪಟ್ಟಣ ಪಂಚಾಯಿತಿ ಸ್ಥಳದಾನಿ ಪಿ. ಜನಾರ್ದನ ಮಧ್ಯಸ್ಥ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.