ADVERTISEMENT

ಪೇಜಾವರ ವಿಶ್ವಪ್ರಸನ್ನ ಶ್ರೀಗಳ ಪಲ್ಲಕ್ಕಿಗೆ ಸಾಂಪ್ರದಾಯಿಕ ಟಚ್‌

ತೆಂಗಿನ ಗರಿ, ಬಾಳೆ ದಂಡಿನಿಂದ ತಯಾರಿಸಲ್ಪಟ್ಟ ವಿಶೇಷ ಪಲ್ಲಕ್ಕಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 15:34 IST
Last Updated 17 ಜನವರಿ 2020, 15:34 IST
ತೆಂಗಿನ ಗರಿ ಹಾಗೂ ಬಾಳೆ ದಂಡಿನಿಂದ ತಯಾರಿಸಿದ ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿಯ ಪಲ್ಲಕ್ಕಿ.
ತೆಂಗಿನ ಗರಿ ಹಾಗೂ ಬಾಳೆ ದಂಡಿನಿಂದ ತಯಾರಿಸಿದ ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿಯ ಪಲ್ಲಕ್ಕಿ.   

ಉಡುಪಿ: ಪರ್ಯಾಯ ಉತ್ಸವದ ವೇಳೆ ಅಷ್ಠಮಠಗಳ ಮಠಾಧೀಶರನ್ನು ವಾಹನ ಸಹಿತ ಪಲ್ಲಕ್ಕಿಯಲ್ಲಿ ಕೃಷ್ಣಮಠಕ್ಕೆ ಕರೆತರುವುದು ಸಂಪ್ರದಾಯ. ಅದರಂತೆ ಅದಮಾರು ಪರ್ಯಾಯದಲ್ಲೂ ಪಲ್ಲಕ್ಕಿ ಸಿದ್ಧಗೊಂಡಿದ್ದು, ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿಯ ಪಲ್ಲಕ್ಕಿಯನ್ನು ತೆಂಗಿನ ಗರಿ ಹಾಗೂ ಬಾಳೆ ದಿಂಡಿನಿಂದ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.

ವಿಶ್ವಪ್ರಸನ್ನ ಶ್ರೀಗಳು ಸ್ವತಃ ಬಾಳೆದಿಂಡು ಹಾಗೂ ತೆಂಗಿನ ಗರಿಗಳಿಂದ ಅಲಂಕೃತಗೊಂಡ ಪಲ್ಲಕ್ಕಿಯನ್ನು ಅಪೇಕ್ಷಿಸಿದ್ದು, ಅದರಂತೆ ಪಲ್ಲಕ್ಕಿಯನ್ನು ಸಜ್ಜುಗೊಳಿಸಲಾಗಿದೆ. ಶ್ರೀಗಳ ಆಸೆಯಂತೆ ತೆಂಗಿನ ಗರಿಗಳನ್ನು ಪಲ್ಲಕ್ಕಿಯ ಸುತ್ತಲೂ ಅಲಂಕಾರ ಮಾಡಲಾಗಿದೆ.

ವಾಸುದೇವ ಅಡಿಗ ಕೊಟ್ಟಾರಿ ಹಾಗೂ ವಾಸುದೇವ ಭಟ್‌ ಪೆರಂಪಳ್ಳಿ ಅವರ ಮಾರ್ಗದರ್ಶನದಲ್ಲಿ ಸುಂದರ ಪಲ್ಲಕ್ಕಿಯನ್ನು ನಿರ್ಮಿಸಲಾಗಿದ್ದು, ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದೆ.

ADVERTISEMENT

ಭೂತಕೋಲ ಕಲಾವಿದರ ಕುಸರಿ

ಪ್ರಸಿದ್ಧ ಭೂತಕೋಲ ಕಲಾವಿದರಾದ ಸಾಧು ಪಾಣರ ಮಂಚಿಕೆರೆ ನೇತೃತ್ವದಲ್ಲಿ ವಿಶೇಷ ಪಲ್ಲಕ್ಕಿಯನ್ನು ಸಿದ್ಧಪಡಿಸಲಾಗಿದೆ. ಮಗ ದಿನೇಶ್‌ ಪಾಣರ ಹಾಗೂ ನಾರಾಯಣ ಪಾಣರ ಇದಕ್ಕೆ ಸಾಥ್‌ ಕೊಟ್ಟಿದ್ದಾರೆ. ಮೂರು ಮಂದಿ ಭೂತಕೋಲ ಕಲಾವಿದರು, ಕೋಲದಲ್ಲಿ ದೈವದ ಅಣಿಗಳಿಗೆ ವಿನ್ಯಾಸಗೊಳಿಸುವ ಮಾದರಿಯನ್ನು ಪಲ್ಲಕ್ಕಿಗೆ ಅಲಂಕಾರ ಮಾಡಿದ್ದಾರೆ.

ಭೂತಕೋಲ, ವೇದಿಕೆಯ ಅಲಂಕಾರ, ಅಯ್ಯಪ್ಪ ದೇವರ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಸಮಾರಂಭಗಳ ಅಲಂಕಾರ ಕಾರ್ಯಗಳಲ್ಲೂ ಇವರು ತೊಡಗಿಸಿಕೊಂಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಪಲ್ಲಕ್ಕಿ ತಯಾರಿ ಕೆಲಸದಲ್ಲಿ ತೊಡಗಿದ್ದು, ಸಂಜೆಯ ವೇಳೆಗೆ ಕುಸರಿ ಕಾರ್ಯ ಪೂರ್ಣಗೊಳಿಸಿ ಹಸ್ತಾಂತರ ಮಾಡಲಾಗಿದೆ ಎಂದು ಸಾಧು ಪಾಣರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.