ಬಂಧನ
(ಪ್ರಾತಿನಿಧಿಕ ಚಿತ್ರ)
ಉಡುಪಿ: ಉಡುಪಿ ನಗರಸಭೆಗೆ ಆಸ್ತಿ ತೆರಿಗೆ ಪಾವತಿಸುವಲ್ಲಿ ವಂಚನೆ ಎಸಗಿರುವ ಆರೋಪದಲ್ಲಿ ಇಬ್ಬರನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬನ್ನಂಜೆಯ ಬಿ. ಶಾಲಿನಿ (56), ಕುಕ್ಕಿಕಟ್ಟೆಯ ಗಣೇಶ್ (24) ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ ಪ್ರಸಾದ್ ಪಿ. ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ.
ಆನಂದ ಸುವರ್ಣ ಎಂಬುವವರು 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ಒಟ್ಟು ₹34,730 ಅನ್ನು ಶಾಲಿನಿ ಅವರಿಗೆ ನೀಡಿದ್ದು, ಅದಕ್ಕೆ ಶಾಲಿನ ಅವರು ತೆರಿಗೆ ಸ್ವೀಕೃತಿ ರಶೀದಿಯನ್ನು ನೀಡಿದ್ದರು. ಈಚೆಗೆ ತೆರಿಗೆ ಪಾವತಿ ವಿಚಾರವಾಗಿ ವಂಚನೆ ನಡೆದಿರುವ ಮಾಹಿತಿ ಅರಿತು ಆನಂದ ಸುವರ್ಣ ಅವರು ಆಸ್ತಿ ತೆರಿಗೆ ಪೋರ್ಟಲ್ನಲ್ಲಿ ಪರಿಶೀಲಿಸಿದಾಗ ತಮ್ಮ ತೆರಿಗೆ ಪಾವತಿಯಾಗದೆ ಬಾಕಿ ಉಳಿದಿರುವುದು ಕಂಡು ಬಂದಿತ್ತು.
ಶಾಲಿನಿ ಅವರು ಆನಂದ ಸುವರ್ಣ ಅವರು ನೀಡಿದ ತೆರಿಗೆ ಹಣವನ್ನು ಸರ್ಕಾರಕ್ಕೆ ಕಟ್ಟದೇ ಚಲನ್ನಲ್ಲಿ ಯೂನಿಯನ್ ಬ್ಯಾಂಕ್ನ ಮೊಹರು ಹಾಕಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ವಂಚನೆ ಮಾಡಿರುವುದಾಗಿ ನಗರಸಭೆಯ ಪೌರಾಯುಕ್ತರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.