
ಉಡುಪಿ: ಶಿರ್ವದ ಕುರ್ಕಾಲು ಗ್ರಾಮದ ಶಂಕರಪುರದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬಾಮಣಗಿ ಗ್ರಾಮದ ಆನಂದ ಅಲಿಯಾಸ್ ಹಸನ್ ಸಾಬ್ ಅಮೀನಗಡ (49), ಕುರುದ ಕೆಂಚನಳ್ಳಿಯ ಕಿರಣ್ ಧರ್ಮರಾಜ್ ಗೋಡಿಮನಿ (19), ಬಾರಕಿ ಹಡಲಗಿಯ ಶಶಿಧರ (19) ಬಂಧಿತ ಆರೋಪಿಗಳು.
ಕುರ್ಕಾಲು ಗ್ರಾಮದ ಹೆಲೆನ್ ಡಿಸೋಜ ಎಂಬುವವರು ಶನಿವಾರ ಮನೆಯ ಹಿಂಬದಿಯಲ್ಲಿ ಮಲ್ಲಿಗೆ ಕಟ್ಟುತ್ತಿದ್ದ ವೇಳೆ, ಈ ಹಿಂದೆ ಬಾಡಿಗೆಗೆ ಇದ್ದ ಆನಂದ ಹಾಗೂ ಇತರ ಇಬ್ಬರು ಆರೋಪಿಗಳು ಬಾಡಿಗೆ ರೂಮ್ ವಿಚಾರಿಸಲು ಬಂದಿದ್ದರು. ಬಾಡಿಗೆ ರೂಮ್ ಇಲ್ಲ ಎಂದಾಗ ಅವರು ಅಲ್ಲೇ ಸಮೀಪದ ಬೇರೆ ಮನೆ ಕಡೆಗೆ ಹೋಗಿದ್ದರು.
ಸ್ವಲ್ಪ ಸಮಯದ ಬಳಿಕ ಒಬ್ಬ ವಾಪಸ್ ಬಂದು ಮೊಬೈಲ್ ನಂಬರ್ ಕೇಳಿದ್ದನು. ಹೆಲೆನ್ ಅವರು ಮೊಬೈಲ್ ನಂಬರ್ ಹೇಳುತ್ತಿರುವಾಗ ಕುತ್ತಿಗೆಗೆ ಕೈ ಹಾಕಿ 28 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದು ಓಡಿದ್ದ. ಓಡುವಾಗ ತಡೆಯಲು ಬಂದ ಹೆಲೆನ್ ಅವರ ಅಕ್ಕ ತೆರಜ ಎಂಬುವವರನ್ನು ದೂಡಿ ಹಾಕಿ ಮೂವರೂ ಬೈಕ್ ನಲ್ಲಿ ಪರಾರಿಯಾಗಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಶಿರ್ವ ಠಾಣೆಯ ಪೊಲೀಸರು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಮೂವರು ಆರೋಪಿಗಳು ಕೃತ್ಯ ಎಸಗಿರುವುದು ಕಂಡುಬಂದಿದೆ. ಕೂಡಲೇ ಜಿಲ್ಲಾ ನಿಯಂತ್ರಣ ಕೊಠಡಿಯ ಮೂಲಕ ಜಿಲ್ಲೆಯ ಎಲ್ಲಾ ಚೆಕ್ಪೋಸ್ಟ್ಗಳಿಗೂ ಮಾಹಿತಿ ರವಾನಿಸಲಾಗಿತ್ತು.
ಕೃತ್ಯ ನಡೆದ ಮೂರರಿಂದ ನಾಲ್ಕು ಗಂಟೆಯೊಳಗಾಗಿ ಶಿರೂರು ಚೆಕ್ ಪೋಸ್ಟ್ನಲ್ಲಿ ಬೈಂದೂರು ಪೊಲೀಸರು ಆರೋಪಿಗಳನ್ನು ತಡೆದು ನಿಲ್ಲಿಸಿ, ಶಿರ್ವ ಪೊಲೀಸರ ವಶಕ್ಕೆ ನೀಡಿದರು. ಶಿರ್ವ ಪೊಲೀಸರು ಆರೋಪಿಗಳಿಂದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ಕಾಪು ಸಿಪಿಐ ಅಜ್ಮತ್ ಅಲಿ ನೇತೃತ್ವದಲ್ಲಿ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ, ಬೈಂದೂರು ಪಿಎಸ್ಐ ಸುನಿಲ್ ಕುಮಾರ್, ಶಿರ್ವ ಠಾಣೆಯ ದಯಾನಂದ ಪ್ರಭು, ಅನ್ವರ್ ಅಲಿ, ಹರೀಶ, ಯಲಾಲ್ಲಿಂಗ ಸುರೇಶ ಹಾಗೂ ಬೈಂದೂರು ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.