ADVERTISEMENT

ಉಡುಪಿ: ಸೀಮಿತ ಸಂಖ್ಯೆಯ ಭಕ್ತರ ಉಪಸ್ಥಿತಿಯಲ್ಲಿ ಕೃಷ್ಣಮಠದಲ್ಲಿ ವಿಟ್ಲಪಿಂಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 14:07 IST
Last Updated 31 ಆಗಸ್ಟ್ 2021, 14:07 IST
ಉಡುಪಿಯ ಕೃಷ್ಣಮಠದಲ್ಲಿ ವಿಟ್ಲಪಿಂಡಿ ಉತ್ಸವ
ಉಡುಪಿಯ ಕೃಷ್ಣಮಠದಲ್ಲಿ ವಿಟ್ಲಪಿಂಡಿ ಉತ್ಸವ   

ಉಡುಪಿ: ಕೋವಿಡ್‌ನಿಂದಾಗಿ ಸೀಮಿತ ಸಂಖ್ಯೆಯ ಭಕ್ತರ ಉಪಸ್ಥಿತಿಯಲ್ಲಿ ಮಂಗಳವಾರ ಕೃಷ್ಣಮಠದಲ್ಲಿ ವಿಟ್ಲಪಿಂಡಿ ಉತ್ಸವ ನೆರವೇರಿತು. ರಥಬೀದಿಯಲ್ಲಿ ನಡೆದ ಕೃಷ್ಣನ ಲೀಲೋತ್ಸವಗಳನ್ನು ಭಕ್ತರು ಕಣ್ತುಂಬಿಕೊಂಡರು.

ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಯನ್ನು ಸುವರ್ಣ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು, ಮಠದ ಸಿಬ್ಬಂದಿ ರಥವನ್ನು ಎಳೆದು ಕೃಷ್ಣನ ಸ್ಮರಣೆ ಮಾಡಿದರು. ಕನಕ ನವರತ್ನ ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರಮೌಳೇಶ್ವರನ ಮೂರ್ತಿಗಳನ್ನು ಇಡಲಾಗಿತ್ತು. ಎರಡೂ ರಥಗಳು ರಥಬೀದಿಯ ಸುತ್ತ ಮೆರವಣಿಗೆಯಲ್ಲಿ ಸಾಗಿದವು.

ರಥಬೀದಿಯಲ್ಲಿ 14 ಗುರ್ಜಿಗಳಲ್ಲಿ ಕಟ್ಟಲಾಗಿದ್ದ ಮೊಸರಿನ ಕುಡಿಕೆಗಳನ್ನು ಗೊಲ್ಲ ವೇಷಧಾರಿಗಳು ಒಡೆದು ಸಂಭ್ರಮಿಸಿದರು. ಬಳಿಕ, ಅದಮಾರು ಶ್ರೀಗಳು ದೇವರ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಿ ಉತ್ಸವಕ್ಕೆ ತೆರೆ ಎಳೆದರು.

ADVERTISEMENT

ಸೋಮವಾರ ಮಧ್ಯರಾತ್ರಿ 12.17ಕ್ಕೆ ಕೃಷ್ಣ ದೇವರಿಗೆ ತುಳಸಿ ಅರ್ಚನೆ ಹಾಗೂ ಮಹಾಪೂಜೆ ನೆರವೇರಿಸಿದ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಸ್ವಾಮೀಜಿ, ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಗರ್ಭಗುಡಿಯಲ್ಲಿ ಕೃಷ್ಣನಿಗೆ ಅರ್ಘ್ಯ ನೀಡಿದರು. ಬಳಿಕ ಚಂದ್ರೋದಯ ಸಮಯದಲ್ಲಿ ತುಳಸೀಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ನೀಡಿದರು. ಬಳಿಕ ಭಕ್ತರಿಂದಲೂ ಅರ್ಘ್ಯ ಸಮರ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.