ಉಡುಪಿ:ಅಂತೂ ಇಂತೂ ನಡೆದೇ ಹೋಯಿತು ಮಂಡೂಕಗಳ ವಿವಾಹ ಮಹೋತ್ಸವ.
ತೀವ್ರ ಬರ ಎದುರಿಸುತ್ತಿರುವ ಉಡುಪಿಯಲ್ಲಿ ನೀರಿಗಾಗಿ ಮಳೆರಾಯನನ್ನು ಭೂಮಿಗೆ ಕರೆಸುವಸಲುವಾಗಿ ಕಪ್ಪೆಗಳಿಗೆ ಮದುವೆ ಮಾಡುವ ಪದ್ಧತಿ ಇದೆ. ಇದರಂತೆ ಮುಂಗಾರು ಕೈ ಕೊಟ್ಟು ರೈತರು, ಜನ ಜಾನುವಾರುಗಳಿಗೆ ನೀರಿಲ್ಲದೆ ಪರದಾಡುತ್ತಿದ್ದಾರೆ.
ಮಳೆಗಾಗಿ ಶುಕ್ರವಾರ ಹೋಮ ಹವನಗಳೂ ನಡೆದಿದ್ದವು. ಇದೀಗ ಎರಡು ಕಪ್ಪೆಗಳನ್ನು ಹಿಡಿದು ಅವುಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ಇದು ಮೂಢನಂಬಿಕೆ, ಪ್ರಾಣಿಗಳಿಗೆ ಹಿಂಸೆ ಕೊಡಲಾಗುತ್ತಿದೆ ಎಂದು ಪ್ರಾಣಿಪ್ರಿಯರು ಕೂಗಿಕೊಂಡರೂ ಮಂಡೂಕಗಳ ಮದುವೆ ನಡೆದೇ ಹೋಗಿದೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಪಂಚರತ್ನಾ ಸೇವಾ ಟ್ರಸ್ಟ್ ಸಹಯೋಗದಲ್ಲಿ ಜೂನ್ 8ರಂದು ಮಧ್ಯಾಹ್ನ 12ಕ್ಕೆ ಕಿದಿಯೂರ್ ಹೋಟೆಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ಮಳೆಗಾಗಿ ಕಪ್ಪೆಗಳ ಮದುವೆಯನ್ನು ಆಯೋಜಿಸಿತ್ತು.
ಮಾರುತಿ ವಿಥಿಕಾ ರಸ್ತೆಯಲ್ಲಿರುವ ನಾಗರಿಕ ಸಮಿತಿಯ ಕಚೇರಿಯಿಂದ ಬೆಳಿಗ್ಗೆ 11ಕ್ಕೆ ಕಪ್ಪೆಗಳ ದಿಬ್ಬಣ ಹೊರಟು,ಹಳೆ ಡಯಾನ ವೃತ್ತ, ಕವಿ ಮುದ್ದಣ ಮಾರ್ಗದ ಮೂಲಕ ಕಿದಿಯೂರ್ ಹೋಟೆಲ್ ಪಾರ್ಕಿಂಗ್ ಜಾಗ ತಲುಪಿತು. ‘ವರ್ಷ’ ಹೆಸರಿನ ಹೆಣ್ಣು ಕಪ್ಪೆಗೂ ‘ವರುಣ’ ಹೆಸರಿನ ಗಂಡು ಕಪ್ಪೆಗೂ ಮದುವೆ ನಡದಿದೆ.ಕಪ್ಪೆಗಳ ಮದುವೆಗಾಗಿ ವಿವಾಹ ಆಮಂತ್ರಣ ಪತ್ರಿಕೆಯನ್ನೂ ಸಿದ್ಧಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.