ADVERTISEMENT

ಉತ್ತರ ಕನ್ನಡ: ಯುವಸಮೂಹ ಹದಗೆಡಿಸುವ ‘ಅಮಲು ಗೀಳು’

ಪೊಲೀಸರ ಬಿಗು ಕ್ರಮದ ನಡುವೆಯೂ ತಗ್ಗದ ಮಾದಕ ವಸ್ತು ಸೇವನೆ ಪ್ರಕರಣ

ಗಣಪತಿ ಹೆಗಡೆ
Published 8 ಡಿಸೆಂಬರ್ 2025, 3:06 IST
Last Updated 8 ಡಿಸೆಂಬರ್ 2025, 3:06 IST
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದಿದ್ದ ಮಾದಕ ವಸ್ತುಗಳನ್ನು ಅಂಕೋಲಾ ತಾಲ್ಲೂಕಿನ ಬೊಗ್ರಿಬೈಲಿನಲ್ಲಿರುವ ವೈದ್ಯಕೀಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶ ಪಡಿಸಲು ಇಟ್ಟಿದ್ದ ಪೊಲೀಸರು.
(ಸಂಗ್ರಹ ಚಿತ್ರ)
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದಿದ್ದ ಮಾದಕ ವಸ್ತುಗಳನ್ನು ಅಂಕೋಲಾ ತಾಲ್ಲೂಕಿನ ಬೊಗ್ರಿಬೈಲಿನಲ್ಲಿರುವ ವೈದ್ಯಕೀಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶ ಪಡಿಸಲು ಇಟ್ಟಿದ್ದ ಪೊಲೀಸರು. (ಸಂಗ್ರಹ ಚಿತ್ರ)   

ಕಾರವಾರ: ಜಿಲ್ಲೆಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಕಳವಳ ಸೃಷ್ಟಿಸಿದೆ. ಹದಿಹರೆಯದವರೇ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಪೊಲೀಸ್ ತನಿಖೆ ವೇಳೆ ದೃಢಪಡುತ್ತಿದೆ.

ಮಾದಕ ವ್ಯಸನಕ್ಕೆ ತುತ್ತಾದವರು ಹಣಕ್ಕಾಗಿ ಅಪರಾಧ ಕೃತ್ಯಗಳಿಗೂ ಇಳಿಯುತ್ತಿದ್ದಾರೆ. ಅಮಲು ಪದಾರ್ಥ ಖರೀದಿಗೆ ಹಣ ಹೊಂದಿಸಿಕೊಳ್ಳಲು ಕಳವು, ವಂಚನೆಯ ಜೊತೆಗೆ ಗಲಾಟೆ ಮಾಡಿ ಹಣ ಕೀಳುವ ಮಟ್ಟಕ್ಕೂ ಇಳಿಯುತ್ತಿದ್ದಾರೆ. ಅಂತಹ ಹತ್ತಾರು ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿದೆ.

ಕಾಲೇಜುಗಳ ಸಮೀಪ, ಗುಡ್ಡಬೆಟ್ಟಗಳ ತಪ್ಪಲು, ಕಡಲತೀರ, ಪ್ರವಾಸಿ ತಾಣಗಳ ಸಮೀಪದ ಆತಿಥ್ಯ ಗೃಹಗಳು..ಹೀಗೆ ನಿರ್ದಿಷ್ಟ ಪ್ರದೇಶಗಳು ಮಾದಕ ವಸ್ತು ಸೇವನೆ ಮಾಡುವವರ ಅಡ್ಡೆಯಾಗಿ ಮಾರ್ಪಡುತ್ತಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುವ ಆರೋಪ.

ADVERTISEMENT

ದುಬಾರಿ ಬೆಲೆಯ ಕೊಕೇನ್, ಹೆರಾಯಿನ್‌ನಂತಹ ಮಾದಕ ಪದಾರ್ಥ ಜಿಲ್ಲೆಯಲ್ಲಿ ಬಳಕೆ ಆಗುವುದು ಕಡಿಮೆ. ಆದರೆ, ಕಡಿಮೆ ಬೆಲೆಗೆ ಸಿಗುವ ಗಾಂಜಾ, ಸ್ವಲ್ಪ ದುಬಾರಿ ಎನಿಸುವ ಚರಸ್‌ ಸುಲಭವಾಗಿ ಯುವಕರ ಕೈಗೆ ಸಿಗುತ್ತಿದೆ. ಗಾಂಜಾ ಸೇವನೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. 16ರಿಂದ 29 ವಯಸ್ಸಿನ ಯುವಕರೇ ಈ ದುರ್ವ್ಯಸನಕ್ಕೆ ಗುರಿಯಾಗುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.

ಕಳೆದ ಒಂದೂವರೆ ತಿಂಗಳಿನಲ್ಲಿಯೇ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಯುವಕರನ್ನು ಗಾಂಜಾ ಸೇವನೆ ಮಾಡಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಅವರ ಪೈಕಿ ರೆಸಾರ್ಟ್‌ನಲ್ಲಿ ತಂಗಿದ್ದ ಪ್ರವಾಸಿಗರೂ ಸೇರಿದ್ದಾರೆ. ಚರಸ್ ಮಾರಾಟ ಮಾಡುತ್ತಿದ್ದ ಎಂಜಿನಿಯರ್ ಒಬ್ಬ ಬಂಧಿಸಲಾಗಿದೆ.

‘ಕ್ರೀಡಾಂಗಣ, ಕಾಲೇಜಿನ ಹೊರವಲಯದ ಖಾಲಿ ಜಾಗಗಳಲ್ಲಿ ಸಿಗರೇಟ್ ಸೇವನೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ಪತ್ತೆಯಾಗಿದೆ. ಹೀಗೆ ಸಿಕ್ಕಿಬಿದ್ದವರು ಈಗಷ್ಟೆ ಪಿಯು ಮುಗಿಸಿ ಪದವಿ ಶಿಕ್ಷಣಕ್ಕೆ ಕಾಲಿಟ್ಟವರು. ಇನ್ನೂ ಮೀಸೆ ಮೂಡದ ಯುವಕರು ಗಾಂಜಾದಂತಹ ಅಮಲು ಪದಾರ್ಥ ಸೇವಿಸಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.

‘ಗಾಂಜಾ ಬಳಕೆ ವ್ಯಾಪಕವಾಗುತ್ತಿದೆ. ಘಟ್ಟದ ಮೇಲಿನ ಕೆಲ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಕದ್ದುಮುಚ್ಚಿ ಬೆಳೆಯಲಾದ ಸೊಪ್ಪುಗಳನ್ನು ಹಲವು ಮಾರ್ಗಗಳ ಮೂಲಕ ಕರಾವಳಿ ಭಾಗದ ತಾಲ್ಲೂಕುಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ ಹಾವೇರಿ, ಶಿವಮೊಗ್ಗ ಭಾಗದಿಂದಲೂ ಗಾಂಜಾ ಸೊಪ್ಪು ಜಿಲ್ಲೆಗೆ ಬರುತ್ತಿದೆ’ ಎಂಬುದು ಪೊಲೀಸರ ಶಂಕೆ.

‘ನೆರೆಯ ಗೋವಾ ರಾಜ್ಯದಿಂದ ವ್ಯಾಪಕ ಪ್ರಮಾಣದಲ್ಲಿ ಕಾರವಾರ, ಗೋಕರ್ಣ, ದಾಂಡೇಲಿ ಭಾಗಕ್ಕೆ ಗಾಂಜಾ ಪೂರೈಕೆ ಆಗುತ್ತಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ವಹಿವಾಟು ನಡೆಸಲಾಗುತ್ತಿದೆ. ಕೋಡ್ ವರ್ಡ್‌ಗಳ ಮೂಲಕ ವಹಿವಾಟು ನಡೆಸಲಾಗುತ್ತಿದೆ’ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಗಾಂಜಾ ವ್ಯಸನಿಗಳು ಮತ್ತು ಪೂರೈಕೆದಾರರು ತಮ್ಮದೇ ಕೂಟ ರಚಿಸಿಕೊಳ್ಳುತ್ತಾರೆ. ಆ ಕೂಟದಲ್ಲಿದ್ದವರು ಅಥವಾ ಅದರಲ್ಲಿದ್ದವರ ಆಪ್ತರಿಗಷ್ಟೇ ಅಮಲು ಪದಾರ್ಥ ಪೂರೈಸುತ್ತಾರೆ. ಇಂತಹ ಕೂಟ ಬೇಧಿಸುವುದು ಕಷ್ಟ. ಮಾಹಿತಿ ಹೊರಗೆ ಬರದಂತೆ ಎಚ್ಚರವಹಿಸುತ್ತಾರೆ’ ಎಂದೂ ಹೇಳಿದರು.

‘ಜಿಲ್ಲೆಗೆ ಹೊರ ರಾಜ್ಯ, ಅನ್ಯ ಜಿಲ್ಲೆಗಳಿಂದ ಮಾದಕ ವಸ್ತು ಪೂರೈಕೆ ನಡೆಯುತ್ತಿದೆ. ಗಡಿಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಸೂಚಿಸಲಾಗಿದೆ. ಬೆಂಗಳೂರು, ಇತರಡೆಗಳಿಂದ ಜಿಲ್ಲೆಗೆ ಪ್ರವಾಸಕ್ಕೆ ಬರುವವರು ಬ್ಯಾಗ್‌ಗಳಲ್ಲಿ ಸಣ್ಣ ಪ್ರಮಾಣದಲ್ಲಿ ಅಮಲು ಪದಾರ್ಥ ತಾವೇ ತಂದುಕೊಳ್ಳುತ್ತಿರುವುದು ಈಚೆಗೆ ನಡೆಸಿದ ತನಿಖೆಯೊಂದರಿಂದ ಪತ್ತೆಯಾಯಿತು. ಹೀಗಾಗಿ, ಪ್ರವಾಸಿ ತಾಣಗಳಲ್ಲಿಯೂ ತಪಾಸಣೆ ಬಿಗುಗೊಳಿಸಲಾಗುತ್ತಿದೆ. ಅದರ ಪರಿಣಾಮವಾಗಿ ಗೋಕರ್ಣದಲ್ಲಿ ಅಮಲು ಪದಾರ್ಥ ಸೇವಿಸಿದ್ದ ಹಲವು ಪ್ರವಾಸಿಗರನ್ನು ಪತ್ತೆ ಹಚ್ಚಲಾಯಿತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಹೇಳಿದರು.

‘ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆಸದಂತೆ ನಿಗಾ ಇರಿಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಗಾಂಜಾ, ಇತರ ಮಾದಕ ವಸ್ತುಗಳ ಸಾಗಣೆ ತಡೆ ಕುರಿತು ಅಂಚೆ ಇಲಾಖೆ, ಅಬಕಾರಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದರು.

ಜಿಲ್ಲೆಯ ವಿವಿಧೆಡೆ ವಶಕ್ಕೆ ಪಡೆಯಲಾಗಿದ್ದ ಮಾದಕ ವಸ್ತುಗಳು.
ಮಾದಕ ವಸ್ತುಗಳ ಸೇವನೆ ಮಾಡುವವರ ಜೊತೆಗೆ ಅವುಗಳ ಪೂರೈಕೆದಾರರು ಸಾಗಾಟ ಮಾಡುವವರನ್ನು ಪತ್ತೆ ಹಚ್ಚಲು ಇಲಾಖೆ ಹೆಚ್ಚಿನ ನಿಗಾ ಇಡುತ್ತಿದೆ
ದೀಪನ್ ಎಂ.ಎನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪಾಲಕರು ತಮ್ಮ ಮಕ್ಕಳ ದಿನಚರಿ ಚಲನವಲನದ ಕುರಿತು ಎಚ್ಚರಿಕೆಯಿಂದ ಗಮನಿಸಬೇಕಿದೆ. ಈ ದಿಸೆಯಲ್ಲಿ ಸಾಮುದಾಯಿಕ ಪ್ರಯತ್ನಗಳಾದರೆ ಯುವ ಪೀಳಿಗೆಯನ್ನು ಮಾದಕ ವ್ಯಸನದಿಂದ ದೂರವಿಡಬಹುದು
ಗಂಗಾಧರ ನಾಯ್ಕ ಕಸಾಪ ಭಟ್ಕಳ ಘಟಕದ ಅಧ್ಯಕ್ಷ

ದೂರು ಕೊಡಲು ಕ್ಯೂಆರ್ ಕೋಡ್

ಮಾದಕ ವಸ್ತುಗಳ ಮಾರಾಟ ಸೇವನೆ ಮಾಡುತ್ತಿರುವವರ ವಿರುದ್ಧ ತ್ವರಿತ ದೂರು ಸಂಗ್ರಹಿಸಲು ಪೊಲೀಸ್ ಇಲಾಖೆ ಸಾರ್ವಜನಿಕ ಸ್ಥಳಗಳಲ್ಲಿ ‘ಕ್ಯೂಆರ್ ಕೋಡ್’ ಸ್ಟಿಕ್ಕರ್ ಅಳವಡಿಸಿದೆ. ಕೋಡ್ ಸ್ಕ್ಯಾನ್ ಮಾಡಿ ದೂರು ನೀಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಶಾಲೆ ಕಾಲೇಜುಗಳ ಆವರಣ ಬಸ್ ನಿಲ್ದಾಣ ರೈಲ್ವೆ ನಿಲ್ದಾಣ ಪ್ರವಾಸಿ ತಾಣಗಳು ಸೇರಿದಂತೆ ಸುಮಾರು 650ಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ಟಿಕ್ಕರ್‌ಗಳನ್ನು ಅಂಟಿಸಲಾದೆ. ‘ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ ಪೊಲೀಸ್ ಇಲಾಖೆಯ ವಾಟ್ಸ್ಆ್ಯಪ್‌ ಸಂಖ್ಯೆ ತೆರೆದುಕೊಳ್ಳಲಿದೆ. ಜನರು ತಮಗೆ ಕಂಡು ಬರುವ ಮಾದಕ ವಸ್ತು ಸೇವನೆ ಮಾಡುವವರು ಹಂಚಿಕೆ ಮಾಡುವವರು ಸಾಗಣೆ ಮಾಡುವವರ ಮಾಹಿತಿಯನ್ನು ಇದರಲ್ಲಿ ಹಂಚಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ಆ ಸ್ಥಳದಲ್ಲಿನ ಪೋಟೊ ಅಥವಾ ವೀಡಿಯೊಗಳನ್ನು ಹಂಚಿಕೊಳ್ಳಬಹುದು. ಹೀಗೆ ದೂರು ನೀಡಿದವರ ಮಾಹಿತಿಯನ್ನು ಇಲಾಖೆ ಗೌಪ್ಯವಾಗಿಡುತ್ತದೆ. ದೂರು ಸಲ್ಲಿಕೆಯಾದವರ ವಿರುದ್ಧ ಪೊಲೀಸ್ ತಂಡ ತಕ್ಷಣವೇ ಕಾರ್ಯಾಚರಣೆ ನಡೆಸುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ತಿಳಿಸಿದರು.

ಮಕ್ಕಳ ಬಗ್ಗೆ ಎಚ್ಚರವಿರಲಿ

‘ಮಾದಕ ಪದಾರ್ಥಗಳ ಸೇವನೆ ವ್ಯಸನಕ್ಕೆ ಗುರಿಯಾದವರನ್ನು ಅದರಿಂದ ಒಮ್ಮೆಲೇ ಹೊರತರುವುದು ಕಷ್ಟ. ಇದಕ್ಕೆ ಸಾಕಷ್ಟು ಸಮಯಾವಕಾಶ ತಗಲುತ್ತದೆ. ಜಿಲ್ಲೆಯ ಕಾರವಾರ ಹೊನ್ನಾವರದಲ್ಲಿ ಸರ್ಕಾರೇತರ ಸಂಸ್ಥೆಗಳು ವ್ಯಸನ ಬಿಡಿಸುವ ಕೇಂದ್ರ ನಡೆಸುತ್ತಿವೆ. ಆದರೆ ಇಲ್ಲಿಗೆ ದಾಖಲಾಗುವವರಲ್ಲಿ ಹೆಚ್ಚಿನವರು ಮದ್ಯ ಸೇವನೆಯ ವ್ಯಸನದ ಗೀಳು ಅಂಟಿಸಿಕೊಂಡವರು. ಗಾಂಜಾ ಇತರ ಮಾದಕ ವಸ್ತುಗಳ ಸೇವನೆಗೆ ಗುರಿಯಾದವರನ್ನು ಅದರಿಂದ ಹೊರತರುವ ಅಗತ್ಯವಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ. ‘ಚಿಕ್ಕ ವಯಸ್ಸಿನವರು ಅಮಲು ಪದಾರ್ಥಗಳ ಸೇವನೆಗೆ ತುತ್ತಾಗುತ್ತಿದ್ದಾರೆ. ಅಂತಹವರ ವರ್ತನೆಯಲ್ಲಿ ಸಣ್ಣ ಬದಲಾವಣೆಯಾದರೂ ಪಾಲಕರು ಎಚ್ಚರವಹಿಸಬೇಕು. ತಕ್ಷಣ ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಬೇಕು. ಕೆಲವೊಮ್ಮೆ ಪಾಲಕರ ವರ್ತನೆ ಕೌಟುಂಬಿಕ ವಾತಾವರಣ ಹದಗೆಡುವುದರಿಂದಲೂ ಮಕ್ಕಳು ದಾರಿ ತಪ್ಪಬಹುದು. ಮಕ್ಕಳೊಂದಿಗೆ ಕುಟುಂಬ ಸದಸ್ಯರೂ ಆಪ್ತಸಮಾಲೋಚನೆಗೆ ಒಳಪಟ್ಟರೆ ಸಮಸ್ಯೆ ಇತ್ಯರ್ಥಪಡಿಸಲು ಅನುಕೂಲವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.