ADVERTISEMENT

ಗೋವಾ ಗಡಿ ಪ್ರವೇಶಕ್ಕೆ ನಿರ್ಬಂಧ: ವಾಹನ ಸಂಚಾರ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 6:49 IST
Last Updated 29 ಆಗಸ್ಟ್ 2020, 6:49 IST
ವಾಟಾಳ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು
ವಾಟಾಳ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು   

ಕಾರವಾರ: ಗೋವಾ ಗಡಿ ಪ್ರವೇಶಕ್ಕೆ ಮುಕ್ತ ಅವಕಾಶ ಕೊಡಬೇಕು ಎಂದು ಒತ್ತಾಯಿಸಿ ವಾಟಾಳ್ ಪಕ್ಷದ ನೇತೃತ್ವದಲ್ಲಿ ತಾಲ್ಲೂಕಿನ ಮಾಜಾಳಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ- ಗೋವಾ ಗಡಿಯಲ್ಲಿ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಘು ನಾಯ್ಕ, ‘ಸೆ.1ರಂದು ಗೋವಾ ಗಡಿಯನ್ನು ತೆರೆದು ಮುಕ್ತ ಸಂಚಾರಕ್ಕೆ ಅನುಮತಿ ನೀಡದಿದ್ದರೆ ಸೆ.5ರಂದು ಹೋರಾಟ ತೀವ್ರಗೊಳಿಸಲಾಗುವುದು. ನಂತರ ಕಾರವಾರದ ಮೂಲಕ ಗೋವಾ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ಆ ರಾಜ್ಯಕ್ಕೆ ಹಾಲು, ತರಕಾರಿ, ಮೀನು ಸಾಗಣೆ ತಡೆ ಹಿಡಿಯಲಾಗುವುದು. ಜೈಲು ಭರೋ ಹೋರಾಟವನ್ನೂ ಹಮ್ಮಿಕೊಳ್ಳಲಾಗುವುದು’ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಗೋವಾ ರಾಜ್ಯದ ಕಾಣಕೋಣದ ಡೆಪ್ಯುಟಿ ಕಲೆಕ್ಟರ್ ರಾಜೇಶ ಪ್ರಭು, ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಎಂ.ಸಿ.ಐ.ಆರ್) ನಿಯಮದ ಪ್ರಕಾರ ಗಡಿಯಲ್ಲಿ ನಿರ್ಬಂಧ ಹೇರಲಾಗಿದೆ. ಇದರಲ್ಲಿ ತಾರತಮ್ಯ ಮಾಡುತ್ತಿಲ್ಲ’ಎಂದರು.

ADVERTISEMENT

ಹೊರ ರಾಜ್ಯಗಳಿಂದ ತನ್ನ ರಾಜ್ಯಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪರೀಕ್ಷಾ ವರದಿ ತರಬೇಕು. ಅದಾಗದಿದ್ದರೆ, ಗೋವಾದಲ್ಲಿ 14 ದಿನಗಳ ಹೋಂ ಕ್ವಾರಂಟೈನ್ ಆಗಬೇಕು. ಇಲ್ಲದಿದ್ದರೆ, 2000 ರೂಪಾಯಿ ಪಾವತಿಸಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ನಿಯಮ ಹೇರಿದೆ.

ಕೇಂದ್ರ ಸರ್ಕಾರವು ಅಂತರರಾಜ್ಯ ಗಡಿಗಳನ್ನು ಮುಕ್ತವಾಗಿಡುವಂತೆ ಸೂಚಿಸಿದ್ದರೂ ಗೋವಾ ಪಾಲಿಸದಿರುವುದು ಹೊರ ರಾಜ್ಯಗಳ ಜನರಿಗೆ ಸಮಸ್ಯೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.