ಶಿರಸಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಶಿರಸಿಯ ಕೊಂಕಣ ಕಲಾ ಮಂಡಳ ಸಂಯುಕ್ತ ಆಶ್ರಯದಲ್ಲಿ ಆ.24ರಂದು ನಗರದ ರಂಗಧಾಮದಲ್ಲಿ ‘ಕೊಂಕಣಿ ಮಾನ್ಯತಾ ದಿವಸ’ ಆಚರಿಸಲಾಗುವದು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಮ್ ಸ್ಟ್ಯಾನಿ ಅಲ್ವಾರೀಸ್ ಹೇಳಿದರು.
ಅವರು ನಗರದ ನೆಮ್ಮದಿ ಕೇಂದ್ರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
‘ಈಗಾಗಲೇ ಜಿಲ್ಲೆಯ ಮುಂಡಗೋಡ ಮತ್ತು ಹೊನ್ನಾವರದಲ್ಲಿ ವಿವಿಧ ಕೊಂಕಣಿ ಭಾಷಾ ಕಾರ್ಯಕ್ರಮಗಳನ್ನು ನಡೆಸಿರುವ ಅಕಾಡೆಮಿ ಈಗ ಶಿರಸಿಯಲ್ಲಿ ಈ ಕಾರ್ಯಕ್ರಮ ನಡೆಸುತ್ತಿದೆ. ಶಿರಸಿಯಲ್ಲಿ ಕಳೆದ 25 ವರ್ಷಗಳಿಂದ ಕೊಂಕಣಿ ಭಾಷಾ ಸೇವೆ ಮಾಡುತ್ತಿರುವ ಕೊಂಕಣ ಕಲಾ ಮಂಡಳ ಸಹಕಾರ ನೀಡಿದೆ. ಈ ಕಾರ್ಯಕ್ರಮದ ಉದ್ಘಾಟನೆ ಅಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ’ ಎಂದರು.
‘ನಂತರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕೊಂಕಣಿ ಭಾಷಣ ಹಾಗೂ ಕೊಂಕಣಿ ಗೀತಗಾಯನ ಸ್ಪರ್ಧೆಗಳನ್ನು ನಡೆಸಲಾಗುವುದು. ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಕೊಂಕಣಿ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ’ ಎಂದು ತಿಳಿಸಿದರು.
ಸಭೆಯ ಆರಂಭದಲ್ಲಿ ಕೊಂಕಣ ಕಲಾಮಂಡಳದ ಅಧ್ಯಕ್ಷ ವಾಸುದೇವ ಶಾನಭಾಗ ಅವರು, ಕೊಂಕಣ ಕಲಾ ಮಂಡಳದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರಥಮ ಬಾರಿಗೆ ಶಿರಸಿಗೆ ಆಗಮಿಸಿದ ಅಕಾಡೆಮಿ ಅಧ್ಯಕ್ಷ ಸ್ಟೇನಿ ಅಲ್ವಾರೀಸ್ ಅವರನ್ನು ಸನ್ಮಾನಿಸಲಾಯಿತು.
ಕೊಂಕಣಿ ಅಕಾಡೆಮಿ ಸದಸ್ಯರಾದ ಸುನೀಲ ಸಿದ್ದಿ, ನವೀನ್ ಲೋಬೊ, ರೊವನ್ ಅಲ್ವಿನ್, ಚಂದ್ರು ಉಡುಪಿ, ಕೃಷ್ಣ ಪದಕಿ, ಮನೋಜ ಪಾಲೇಕರ, ವೀಣಾ ಶೇಟ್, ಶಾಂತಾ ಕೊಲ್ಲೆ, ಯೇಸುದಾಸ, ರೊಕಿ ಲೋಪಿಸ್, ಶ್ರೀಧರ ನಾಯಕ, ಆರ್.ಡಿ.ಪೈ, ಹರೀಶ ಪಾಲೇಕರ, ರೇಷ್ಮಾ ಶೇಟ್, ಸುಕನ್ಯಾ ಇತರರು ಉಪಸ್ಥಿತರಿದ್ದರು. ಕೊಂಕಣಿ ಸಾಹಿತಿ ರಾಮು ಕಿಣಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.