
ಕುಮಟಾ: ‘ವಿಜ್ಞಾನ– ತಂತ್ರಜ್ಞಾನದಲ್ಲಿ ಸಾಧನೆ ಮಾಡುವ ಹಂಬಲ ಹೊತ್ತ ವಿದ್ಯಾರ್ಥಿಗಳು ಸ್ವತಃ ಕ್ರಿಯಾಶೀಲರಾಗಿ ಶಿಕ್ಷಕರಿಂದ, ಪ್ರಕೃತಿಯಿಂದ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಕೃತಿಯ ನಂಟು ಮುಖ್ಯ. ಚಾಟ್ ಜಿಟಿಪಿ, ಕೃತಕ ಬುದ್ಧಿಮತ್ತೆಯನ್ನು ಅತಿಯಾಗಿ ಅವಲಂಬಿಸಿದರೆ ಅವು ತಪ್ಪು ದಾರಿಗೆ ಎಳೆಯುವ ಸಾಧ್ಯತೆ ಹೆಚ್ಚು’ ಎಂದು ವಿಜ್ಞಾನಿ ಯೂರಿ ಪೆಟನೆವ್ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಮುಕ್ತಾಯಗೊಂಡ ಎರಡು ದಿನಗಳ ವಿಜ್ಞಾನ-ತಂತ್ರಜ್ಞಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಜ್ಞಾನಿ ರವಿಶಂಕರ ಭಟ್ಟ ಮಾತನಾಡಿ, ‘ಆಧುನಿಕ ಸಂಶೋಧನೆಗಳು ನಾವು ನೆಲೆಸುವ ಭೂಮಿ, ಪರಿಸರವನ್ನು ಉಳಿಸುವಂತಾಬೇಕು. ನಾವೆಲ್ಲ ಸ್ನಾನ, ಬಟ್ಟೆ ಶುಚಿಗೆ ಬಳಸುವ ಸಾಬೂನಿನಲ್ಲಿ ರಾಸಾಯನಿಕ ಬಳಸುವ ಬದಲಾಗಿ ಪ್ರಕೃತಿಯಲ್ಲಿ ಹೇರಳ ಪ್ರಮಾಣದಲ್ಲಿ ಸಿಗುವ ಅಂಟವಾಳ ಹಾಗೂ ಶೀಕೆಕಾಯಿಯಂಥ ಪರಿಸರಸ್ನೇಹಿ ವಸ್ತುಗಳ ಉತ್ಪನ್ನ ಜನರಿಗೆ ದೊರೆಯುವ ದಿಶೆಯಲ್ಲಿ ಸಂಶೋಧನೆ ನಡೆಸಬೇಕು’ ಎಂದು ತಿಳಿಸಿದರು.
‘ಜ್ಞಾನಕ್ಕೆ ಇತಿಮಿತಿ ಇಲ್ಲ ಎನ್ನುವಂತೆ ಸಮ್ಮೇಳನದಲ್ಲಿ ವಿಜ್ಞಾನದ ಎಲ್ಲ ಆಯಾಮಗಳ ಬಗ್ಗೆ ಚರ್ಚೆಯಾಗಿದ್ದು ಐತಿಹಾಸಿಕ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಎಂ.ಡಿ.ಸುಭಾಶ್ಚಂದ್ರನ್ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಾದ ಅಂಕೋಲಾದ ಪವಿತ್ರಾ ಹೆಗಡೆ, ಬೆಂಗಳೂರಿನ ನಂದಿನಿ, ಮೋನಿಕಾ, ಹುಬ್ಬಳ್ಳಿಯ ರಫಿಯಾ ಅನುಭವ ಹಂಚಿಕೊಂಡರು. ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾಲಯದ ಡಾ. ವೈಶಾಲಿ ಗೋಗಿ, ಪ್ರಾಚಾರ್ಯೆ ವಿಜಯಾ ನಾಯ್ಕ, ಸಂಚಾಲಕ ಡಾ. ಐ.ಕೆ. ನಾಯ್ಕ, ಪ್ರಾಧ್ಯಾಪಕರಾದ ಸಂದೇಶ ಎಚ್., ಶಿಲ್ಪಾ ಬಿ.ಎಂ., ಡಾ. ಗೀತಾ ನಾಯಕ,, ಪ್ರತಿಭಾ ಭಟ್ಟ ಇದ್ದರು. ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಪ್ರಬಂಧ ಮಂಡಿಸಿದರು.
ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸದಾ ಆಶಾವಾದಿಗಳಾಗಿರಬೇಕು. ಚರ್ಚೆ ಸಂಪರ್ಕ ತರಗತಿ ಪಾಠ ಓದು ಎಲ್ಲವೂ ಜ್ಞಾನದ ಬಾಗಿಲುಗಳೇ ಆಗಿವೆಡಾ. ಯಶಿರೋ ಆಜುಮಾ ಜಪಾನ್ ವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.