ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಿಣಗಾದ ಮಾಳಸಾ ರಸ್ತೆ ಕ್ರಾಸ್ನಿಂದ ಅಂಚೆ ಕಚೇರಿವರೆಗೆ ಚತುಷ್ಪಥ ಕಾಮಗಾರಿ ಸಂದರ್ಭದಲ್ಲಿ ಸ್ಥಳೀಯರಿಗೆ ಅನುಕೂಲವಾಗುವಂತೆ ಸರ್ವೀಸ್ ರಸ್ತೆ ಮತ್ತು ಚರಂಡಿ ನಿರ್ಮಿಸಿಲ್ಲ.
ಬಿಣಗಾದಿಂದ ಕಾರವಾರದತ್ತ ಸಾಗುವ ಹೆದ್ದಾರಿಯು ಮಾಳಸಾ ಕ್ರಾಸ್ ಮೂಲಕ ಸಾಗುತ್ತದೆ. ಇಲ್ಲಿ ರಸ್ತೆಗೆ ‘ಯು ಟರ್ನ್’ ನೀಡಲಾಗಿದೆ. ಈ ಸ್ಥಳವು ಅತ್ಯಂತ ಕಿರಿದಾಗಿದೆ. ಇಲ್ಲಿ ವಾಹನಗಳು ತಿರುವು ಪಡೆಯುವಾಗ ಅಪಘಾತವಾಗುವ ಸಾಧ್ಯತೆಯಿದೆ.
ಹೆದ್ದಾರಿ ದಕ್ಷಿಣ ಭಾಗದಲ್ಲಿ ಸಾರ್ವಜನಿಕರಿಗೆ ಓಡಾಡಲು ಸರ್ವೀಸ್ ರಸ್ತೆ, ಚರಂಡಿ, ವಿದ್ಯುತ್ ಕಂಬಗಳ ಅಳವಡಿಕೆ ಮಾಡಿಲ್ಲ. ಈ ಭಾಗದಲ್ಲಿ ಭೂ ಸ್ವಾಧೀನ ಇಲಾಖೆಯವರು ಕೆಲವು ಮನೆಗಳಿಗೆ ಲಕ್ಷಾಂತರ ರೂಪಾಯಿ ಪರಿಹಾರ ನೀಡಿದ್ದಾರೆ. ಆದರೂ ಜಾಗವನ್ನು ವಶಪಡಿಸಿಕೊಂಡಿಲ್ಲ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದಾದರೆ ಮಾತ್ರ ಹೆದ್ದಾರಿ ಕಾಮಗಾರಿ ಸುಗಮವಾದೀತು.
ಪದೇ ಪದೇ ಮನವಿ ನೀಡಿದರೂ ಯಾವುದೇ ಕ್ರಮವಾಗದಿರುವ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
– ವಿಷ್ಣು ಹರಿಕಾಂತ, ಶ್ರೀಧರ ಬಿಣಗೆ, ವಿಠ್ಠಲ ಯು.ನಾಯ್ಕ ಮತ್ತು ಪದಾಧಿಕಾರಿಗಳು.
ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಜಿಲ್ಲಾ ಘಟಕ, ಬಿಣಗಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.