ADVERTISEMENT

ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ: ಕಮಾಂಡರ್ ಸಾವು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 12:33 IST
Last Updated 26 ಏಪ್ರಿಲ್ 2019, 12:33 IST
ಡಿ.ಎಸ್.ಚೌಹಾಣ್
ಡಿ.ಎಸ್.ಚೌಹಾಣ್   

ಕಾರವಾರ:ದೇಶದ ಏಕೈಕ ಯುದ್ಧ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಅವಘಡ ನಡೆದಿದೆ. ದುರ್ಘಟನೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಡಿ.ಎಸ್.ಚೌಹಾಣ್ ಮೃತಪಟ್ಟಿದ್ದಾರೆ. ಅವರು ಮಧ್ಯಪ್ರದೇಶದ ರತ್ಲಾಮ್‌ನವರು.

ಇಲ್ಲಿನ ಸೀಬರ್ಡ್ ನೌಕಾನೆಲೆಗೆ ಗುಜರಾತ್‌ನಿಂದ ಮರಳಿ ಬಂದಿದ್ದ ನೌಕೆಯು ಜಟ್ಟಿಯತ್ತ ಸಾಗುವಾಗಬಾಯ್ಲರ್ ಬಳಿಬೆಂಕಿ ಕಾಣಿಸಿಕೊಂಡಿತು. ಕೂಡಲೇ ಕಾರ್ಯಪ್ರವೃತ್ತರಾದ ಚೌಹಾಣ್ ಮತ್ತು ನೌಕೆಯ ಇತರ ಸಿಬ್ಬಂದಿ, ಬೆಂಕಿಯನ್ನು ನಂದಿಸಿದರು. ಅಷ್ಟರಲ್ಲಿಹೊಗೆಯಿಂದಉಸಿರುಗಟ್ಟಿ ಪ್ರಜ್ಞಾಹೀನರಾದ ಚೌಹಾಣ್ ಅವರನ್ನು ನೌಕಾನೆಲೆಯಲ್ಲಿರುವ ‘ಐಎನ್ಎಸ್ ಪತಂಜಲಿ’ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಗಾಯಗೊಂಡ ಇಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅವಘಡದಲ್ಲಿ ವಿಕ್ರಮಾದಿತ್ಯ ನೌಕೆಗೆ ಹೆಚ್ಚಿನ ಹಾನಿಯಾಗಿಲ್ಲ. ಅದರ ಸಮರ ಸನ್ನದ್ಧ ಸ್ಥಿತಿಗೂ ಯಾವುದೇ ಧಕ್ಕೆಯಾಗಿಲ್ಲ. ಅವಘಡದ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ADVERTISEMENT

ಕಾರವಾರ ಗ್ರಾಮೀಣ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಭಾರತ ಮತ್ತು ಫ್ರಾನ್ಸ್ ನೌಕಾಪಡೆಗಳು ಮೇ ಮೊದಲ ವಾರದಲ್ಲಿ ಕಾರವಾರ, ಗೋವಾ ಭಾಗದ ಅರಬ್ಬಿ ಸಮುದ್ರದಲ್ಲಿ ಇದೇ ಮೊದಲ ಬಾರಿಗೆಬೃಹತ್ ಪ್ರಮಾಣದಲ್ಲಿ ಸಮರಾಭ್ಯಾಸ ನಡೆಸಲಿವೆ. ‌‘ವರುಣ್’ ಹೆಸರಿನಈ ಅಭ್ಯಾಸದಲ್ಲಿ ವಿಕ್ರಮಾದಿತ್ಯ ನೌಕೆಯೂ ಭಾಗವಹಿಸಲಿದೆ.

ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ (ಸಂಗ್ರಹ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.