ADVERTISEMENT

ಶಿರಸಿ: ನೆಡುತೋಪಿನಲ್ಲಿ ಯಂತ್ರ ಬಳಕೆಗೆ ವಿರೋಧ

ಗೇರು ಅಭಿವೃದ್ಧಿ ನಿಗಮದಿಂದ ಪಶ್ಚಿಮಘಟ್ಟದ ನೆಡುತೋಪಿನಲ್ಲಿ ಯಂತ್ರಗಳ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 11:52 IST
Last Updated 23 ಜುಲೈ 2020, 11:52 IST
ಗೇರು ನೆಡುತೋಪಿಗೆ ಭೇಟಿ ನೀಡಿ ಅನಂತ ಅಶೀಸರ ಪರಿಶೀಲಿಸಿದರು
ಗೇರು ನೆಡುತೋಪಿಗೆ ಭೇಟಿ ನೀಡಿ ಅನಂತ ಅಶೀಸರ ಪರಿಶೀಲಿಸಿದರು   

ಶಿರಸಿ: ಗೇರು ಅಭಿವೃದ್ಧಿ ನಿಗಮದವರು ಗೇರು ನೆಡುತೋಪುಗಳ ನಿರ್ವಹಣೆಗಾಗಿ ಜೆಸಿಬಿ, ಹಿಟಾಚಿಯಂತಹ ಯಂತ್ರಗಳನ್ನು ಉಪಯೋಗಿಸಿ ಅಪಾರ ಜೀವ ಸಸ್ಯಸಂಕುಲ ನಾಶ ಮಾಡುತ್ತಿದ್ದಾರೆ. ಗೇರು ನಿಗಮವು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಯಂತ್ರ ಉಪಯೋಗಿಸದೇ, ನಿರ್ವಹಣೆ ನಡೆಸಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗೆ ಸೂಚನೆ ನೀಡಿದ್ದಾರೆ.

ಪಶ್ಚಿಮ ಘಟ್ಟದಲ್ಲಿ ಗೇರು ನೆಡುತೋಪು ನಿರ್ಮಿಸಲು 20 ವರ್ಷಗಳ ಹಿಂದೆ ಅರಣ್ಯ ಇಲಾಖೆಯು ಗೇರು ಅಭಿವೃದ್ಧಿ ನಿಗಮಕ್ಕೆ ಸಾವಿರಾರು ಎಕರೆ ಜಾಗ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳ ಕರಾವಳಿ, ಮಲೆನಾಡು ಇಳಿಜಾರು, ನದಿ ಕಣಿವೆಗಳಲ್ಲಿ ಇರುವ ನೆಡುತೋಪುಗಳಲ್ಲಿ ಗೇರು ಗಿಡಗಳ ಜೊತೆ ಸಸ್ಯ ಸಂಕುಲಗಳಿವೆ. ವಿನಾಶದ ಅಂಚಿನಲ್ಲಿರುವ ವೃಕ್ಷಗಳಿವೆ. ಔಷಧ ಸಸ್ಯಗಳು ಸಹ ಇವೆ. ಯಂತ್ರಗಳನ್ನು ಉಪಯೋಗಿಸಿದರೆ, ಇವುಗಳು ನಾಶವಾಗುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಹೊನ್ನಾವರ ತಾಲ್ಲೂಕು ಕರಿಕಾನ ಪರಮೇಶ್ವರಿ ಬೆಟ್ಟ, ಶರಾವತಿ ನದಿ ಪಕ್ಕದ ಖರ್ವಾ ಇಳಿಜಾರು ಬೆಟ್ಟ, ಅಘನಾಶಿನಿ ಕಣಿವೆ ಪ್ರದೇಶ, ಹೊಸನಗರ ತಾಲ್ಲೂಕಿನ ಹನಿಯ ಗುಡ್ಡ, ವಾರಾಹಿ ಇನ್ನೂ ಅನೇಕ ಕಡೆಗಳ ಎತ್ತರ ಬೆಟ್ಟದಲ್ಲಿ ಇಂತಹ ನೆಡುತೋಪುಗಳಿವೆ. ಯಂತ್ರಗಳ ಮೂಲಕ ಇವುಗಳನ್ನು ಸ್ವಚ್ಛಗೊಳಿಸುವ ಕಾಮಗಾರಿಯು ಭೂ ಕುಸಿತಕ್ಕೆ ಕಾರಣವಾಗಬಹುದು. ಹಿಂದೆ ತೀರ್ಥಹಳ್ಳಿ ತಾಲ್ಲೂಕಿನ ಎಡಗುದ್ದೆ ಪ್ರದೇಶದಲ್ಲಿ ಯಂತ್ರಗಳ ಕಾರ್ಯಾಚರಣೆ ನಡೆಸಿದಾಗ, ಸ್ಥಳೀಯರು ಅದನ್ನು ವಿರೋಧಿಸಿದ್ದರು ಎಂದು ಉಲ್ಲೇಖಿಸಿರುವ ಅಶೀಸರ, ಈ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.