ಭಟ್ಕಳ : ಕೇಂದ್ರ ಸರ್ಕಾರ ಮಂಗಳವಾರ ಪಿಎಫ್ಐ ಸಂಘಟನೆಗೆ ನಿಷೇಧ ಹೇರಿದ್ದ ಬೆನ್ನಲ್ಲೇ ಪಟ್ಟಣದಲ್ಲಿ ಬುಧವಾರ ಅಧಿಕಾರಿಗಳ ತಂಡವು ಸಂಘಟನೆಯ ಸ್ಥಳೀಯ ಮುಖಂಡರ ಮನೆಗಳ ಮೇಲೆ ದಾಳಿ ಮಾಡಿದೆ. ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಾಲಿ ಪಟ್ಟಣ ಪಂಚಾಯಿತಿಯ ಮೂಸಾ ನಗರದಲ್ಲಿರುವ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕರೀಮ್ ಹಾಗೂ ಹೆಬಳೆಯ ಹನಿಫಾಬಾದ್ನಲ್ಲಿರುವ ಜಿಲ್ಲಾ ಘಟಕದ ಕಾರ್ಯದರ್ಶಿ ಸಲ್ಮಾನ್ ಮನೆಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಅಧಿಕಾರಿಗಳು ಪಿ.ಎಫ್.ಐ.ಗೆ ಸೇರಿದ ಪುಸ್ತಕ, ಮೊಬೈಲ್ ಫೋನ್ ಸೇರಿದಂತೆ ಮಹತ್ವದ ದಾಖಲೆಗಳನ್ನು ಪರಿಶೀಲಿಸಿ ವಶಪಡಿಸಿಕೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಇಬ್ಬರೂ ಮನೆಗಳಲ್ಲಿ ಇರಲಿಲ್ಲ.
ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ ಮತ್ತು ಸಿ.ಪಿ.ಐ ಮಹಾಬಲೇಶ್ವರ ನಾಯ್ಕ ಅವರ ತಂಡವು ಕರೀಮ್ ಮನೆಯಲ್ಲಿ ಪರಿಶೀಲನೆ ನಡೆಸಿತು. ಡಿ.ವೈ.ಎಸ್ಪಿ ಕೆ.ಯು.ಬೆಳ್ಳಿಯಪ್ಪ ಹಾಗೂ ತಹಶೀಲ್ದಾರ್ ಬಿ.ಸುಮಂತ್ ಅವರ ತಂಡವು ಸಲ್ಮಾನ್ ಮನೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.