ADVERTISEMENT

ಸಕಾರಾತ್ಮಕ ಚಿಂತನೆಯೂ ಕೋವಿಡ್‌ಗೆ ಚಿಕಿತ್ಸೆ!

ಸೋಂಕಿತರಿಗೆ ನೀಡುವ ಚಿಕಿತ್ಸಾ ವಿಧಾನ ವಿವರಿಸಿದ ‘ಕ್ರಿಮ್ಸ್’ನ ತಜ್ಞ ವೈದ್ಯರು

ಸದಾಶಿವ ಎಂ.ಎಸ್‌.
Published 25 ಮೇ 2020, 16:28 IST
Last Updated 25 ಮೇ 2020, 16:28 IST
   

ಕಾರವಾರ: ‘ಕೋವಿಡ್ 19 ಎಂದರೆ ವೈರಲ್ ಜ್ವರವಷ್ಟೇ. ಒಂದು ರೀತಿಯಲ್ಲಿ ನೆಗಡಿಯ ಅಣ್ಣ ಇದ್ದಂತೆ. ಇದರ ಬಗ್ಗೆ ಆತಂಕ ಪಡುವ ಬದಲು ಸಕಾರಾತ್ಮಕವಾದ ಆಲೋಚನೆ ಬೆಳೆಸಿಕೊಳ್ಳಬೇಕು..’

ಹೀಗೆಂದು ಹೇಳುತ್ತ ಮುಗುಳ್ನಕ್ಕವರುಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಡೀನ್ಡಾ.ಗಜಾನನ ನಾಯಕ.

‘ಇತರ ವೈರಾಣು ಜ್ವರಗಳಿಗೆನೀಡುವ ಮಾದರಿಯ ಚಿಕಿತ್ಸೆಯನ್ನೇ ಕೋವಿಡ್‌ ಸೋಂಕಿತರಿಗೂ ನೀಡಲಾಗುತ್ತದೆ. ಸೋಂಕಿನ ಲಕ್ಷಣ ರಹಿತವಾಗಿರುವವರಿಗೆ ಸೋಂಕು ನಿವಾರಕ ಮತ್ತು ನೋವು ನಿವಾರಕ ಔಷಧಿಗಳನ್ನು ಸೇವಿಸಲು ಸೂಚಿಸಲಾಗುತ್ತದೆ. ಅವರ ಶರೀರದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲು ವಿಟಮಿನ್ ಗುಳಿಗೆ ಶಿಫಾರಸು ಮಾಡಲಾಗುತ್ತದೆ. ಆದರೆ,‌ ಇವೆಲ್ಲಕ್ಕಿಂತ ಮುಖ್ಯವಾಗಿ ತನಗೇನೂ ಆಗಿಲ್ಲ ಎಂಬ ಮನೋಭಾವನೆ ಮುಖ್ಯ’ ಎಂದು ಅವರು ವಿವರಿಸಿದರು.

ADVERTISEMENT

ಸಂಸ್ಥೆಯ ತಜ್ಞ ವೈದ್ಯ ಡಾ.ಅಮಿತ್ ಕಾಮತ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಎಲ್ಲ ಕಡೆಯೂ ಸೋಂಕಿತರಿಗೆ ಕೋವಿಡ್ವಾರ್ಡ್‌ನಲ್ಲೇಚಿಕಿತ್ಸೆ ನೀಡಲಾಗುತ್ತಿದೆ. ಅದಕ್ಕೆಂದೇ ನಿಗದಿಯಾಗಿರುವ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳ ಆರೈಕೆಗೆ ಶ್ರಮಿಸುತ್ತಿದ್ದಾರೆ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಔಷಧಿ ಶಿಫಾರಸು ಮಾಡಲಾಗುತ್ತದೆ. ರೋಗಿಗಳಿಗೆ ಆರಂಭದಲ್ಲಿ ಐದು ದಿವಸ ಔಷಧಿ ಸೇವಿಸಲು ತಿಳಿಸಲಾಗುತ್ತದೆ. ನಂತರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಲಾಗುತ್ತದೆ’ ಎಂದು ಚಿಕಿತ್ಸಾ ವಿಧಾನವನ್ನು ತಿಳಿಸಿದರು.

‘ಕೋವಿಡ್‌ಗೆ ಇನ್ನೂ ನಿರ್ದಿಷ್ಟವಾದ ಔಷಧಿ ಸಿದ್ಧವಾಗಿಲ್ಲ.ಆದರೂ ಈಗಅನುಸರಿಸುತ್ತಿರುವ ಪದ್ಧತಿಯನ್ನು ಚಿಕಿತ್ಸೆ ಎಂದೇ ಪರಿಗಣಿಸಲಾಗುತ್ತದೆ. ಪ್ಲಾಸ್ಮಾ ಥೆರಪಿ, ಮೋನೊಕ್ಲೋನಲ್ ಆ್ಯಂಟಿ ಬಾಡೀಸ್ ಮುಂತಾದ ಪದ್ಧತಿಗಳೂ ಈಗ ಅಭಿವೃದ್ಧಿಯ ಹಂತದಲ್ಲಿವೆ. ಜೊತೆಗೇ ಸೋಂಕು ನಿವಾರಕ ಹೊಸ ಔಷಧಗಳನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಕ್ರಿಮ್ಸ್‌ನಲ್ಲಿರುವಎಲ್ಲ ರೋಗಿಗಳೂಸೋಂಕುಲಕ್ಷಣ ರಹಿತರು. ಅವರ ಆರೋಗ್ಯ ಸ್ಥಿರವಾಗಿದೆ.ಯಾರಿಗೂಉಸಿರಾಟದ ತೊಂದರೆ, ಜ್ವರ ಮುಂತಾದ ಸಮಸ್ಯೆಗಳಿಲ್ಲ. ಆದ್ದರಿಂದಅವರಿಗೆ ಅತ್ಯಂತ ಸರಳವಾದ ಚಿಕಿತ್ಸೆ ಸಾಕಾಗುತ್ತದೆ. ಹೆಚ್ಚಿನ ಸಿಬ್ಬಂದಿಯ ಅಗತ್ಯವೂ ಇಲ್ಲ. ಆದರೂ ದಿನದ 24 ಗಂಟೆ ಮೂವರು ಅಥವಾ ನಾಲ್ವರು ವೈದ್ಯರ ತಂಡ,ಆರು ನರ್ಸ್‌ಗಳು ಆರೈಕೆಯಲ್ಲಿ ತೊಡಗಿದ್ದಾರೆ. ಇನ್ನೂ ಮೂವರು ಹೆಚ್ಚುವರಿಯಾಗಿ ಚಿಕಿತ್ಸೆಗೆ ಸಿದ್ಧರಿದ್ದಾರೆ’ ಎಂದೂಮಾಹಿತಿ ನೀಡಿದರು.

‘ಕೋವಿಡ್ ವಾರ್ಡ್‌ನಲ್ಲಿ ಕೂಡ ಸಾಕಷ್ಟು ಅಂತರದಲ್ಲಿ ಹಾಸಿಗೆಗಳನ್ನು ಅಳವಡಿಸಲಾಗಿದೆ. ಹಾಗಾಗಿ ಅಲ್ಲಿ ಗುಣಮುಖರಾದವರಿಗೆ ಪುನಃ ಸೋಂಕು ಹರಡಲು ಅವಕಾಶವಿಲ್ಲ. ಸೋಂಕಿತರ ಗಂಟಲುದ್ರವದ ಎರಡು ಪರೀಕ್ಷೆಗಳು ನೆಗೆಟಿವ್ ಬಂದರೆ ಮಾತ್ರ ಅವರನ್ನು 14ನೇ ದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಬಳಿಕ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲೇ ಇಡಲಾಗುತ್ತದೆ’ ಎಂದರು.

‘ಹೆಮ್ಮೆಯವಿಚಾರ’:‘ಕೊರೊನಾ ವೈರಸ್ ಹಾವಳಿಯ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳು ಸದಾ ಬಾಗಿಲು ತೆರೆದಿದ್ದವು. ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಯ ಸೇವಾ ಮನೋಭಾವದಿಂದ ಇತರ ರೋಗಿಗಳಿಗೂ ಅನುಕೂಲವಾಗಿದೆ. ವೈದ್ಯರು ತಮ್ಮ ಮನೆಗಳಲ್ಲಿ ಸಮಸ್ಯೆಗಳಿದ್ದರೂ ಕೋವಿಡ್ ರೋಗಿಗಳ ಚಿಕಿತ್ಸೆಗೆ ಮುಂದೆ ಬಂದಿದ್ದಾರೆ. ರೋಗಿಗಳ ಆರೈಕೆಯೇನಮ್ಮ ಕರ್ತವ್ಯ ಎಂದು ನಿಂತಿದ್ದಾರೆ. ಇದು ಅಭಿಮಾನ ಪಡುವ ವಿಚಾರ’ಎಂದು ಡಾ.ಗಜಾನನ ನಾಯಕ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಗುಣಮುಖರಾದವರು ಏನು ಮಾಡಬೇಕು?

* ಪರಸ್ಪರ ಅಂತರ ಕಾಯ್ದುಕೊಳ್ಳಬೇಕು

* ಕಡ್ಡಾಯವಾಗಿ ಮುಖಗವಸು ಧರಿಸಬೇಕು

* ಆಹಾರದಲ್ಲಿ ನಿರ್ದಿಷ್ಟವಾದ ಪಥ್ಯದ ಅಗತ್ಯವಿಲ್ಲ

* ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ಅತ್ಯಗತ್ಯ

* ವೈದ್ಯರು ಹೇಳಿದ್ದರ ಹೊರತುಬೇರೆ ಚಿಕಿತ್ಸೆ ಬೇಕಿಲ್ಲ

* ಮೊದಲೇ ಇದ್ದ ಕಾಯಿಲೆಗೆ ಔಷಧಿ ಸೇವಿಸಬೇಕು

* ಯಾವುದೇ ವದಂತಿಗಳಿಗೆ ಕಿವಿಗೊಡಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.