ADVERTISEMENT

ನಿರ್ಜನ ಬೀದಿಯಲ್ಲಿ ಬಿಸಿಲು–ನೆರಳಿನದೇ ದರ್ಬಾರು !

ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್ ನಿಯಮ ಪಾಲಿಸಿದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 11:37 IST
Last Updated 12 ಜುಲೈ 2020, 11:37 IST
ಜನ ಸಂಚಾರವಿಲ್ಲದೇ ಸ್ತಬ್ಧವಾಗಿದ್ದ ಶಿರಸಿಯ ಅಂಚೆ ವೃತ್ತದಲ್ಲಿ ಬಿಸಿಲು ನೆರಳಿನ ಆಟ
ಜನ ಸಂಚಾರವಿಲ್ಲದೇ ಸ್ತಬ್ಧವಾಗಿದ್ದ ಶಿರಸಿಯ ಅಂಚೆ ವೃತ್ತದಲ್ಲಿ ಬಿಸಿಲು ನೆರಳಿನ ಆಟ   

ಶಿರಸಿ: ಈ ಭಾನುವಾರ ಕೂಡ ತಾಲ್ಲೂಕಿನಲ್ಲಿ ಲಾಕ್‌ಡೌನ್‌ಗೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದರು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಜನಸಂಚಾರ ತೀರಾ ವಿರಳವಾಗಿತ್ತು. ಜನರು ಮನೆಯಲ್ಲೇ ಇದ್ದು, ಕುಟಂಬದ ಸದಸ್ಯರೊಂದಿಗೆ ಕಾಲಕಳೆದರು.

ನಗರದಲ್ಲಿ ಶನಿವಾರ ಒಂದೇದಿನ 24 ಕೋವಿಡ್ 19 ಪ್ರಕರಣಗಳು ದೃಢಪಟ್ಟಿದ್ದರಿಂದ ಭಯಭೀತರಾಗಿರುವ ಜನರು, ಅನಗತ್ಯ ಸಂಚಾರವನ್ನು ಕಡಿಮೆ ಮಾಡಿದ್ದರು. ಮುಸ್ಸಂಜೆಯ ವೇಳೆಗಾಗಲೇ ಪೇಟೆ ಸ್ತಬ್ಧಗೊಂಡಿತ್ತು. ಭಾನುವಾರ ಇಡೀ ದಿನ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಕೆಲ ಕಡೆಗಳಲ್ಲಿ ಔಷಧ ಅಂಗಡಿ ಕೂಡ ಬಂದಾಗಿತ್ತು. ಸಾರಿಗೆ ಸಂಸ್ಥೆ ಬಸ್‌ಗಳು, ಆಟೊರಿಕ್ಷಾ ಕೂಡ ರಸ್ತೆಗಿಳಿಯಲಿಲ್ಲ. ಎಲ್ಲ ಪ್ರಮುಖ ಬೀದಿಗಳು ನಿರ್ಜನವಾಗಿದ್ದವು.

ಹಾಲಿನ ಅಂಗಡಿ, ಆಸ್ಪತ್ರೆ, ಪೆಟ್ರೋಲ್ ಬಂಕ್‌ಗಳು ಬಾಗಿಲು ತೆರೆದಿದ್ದವು. ತೀರಾ ತುರ್ತು ಕೆಲಸವಿದ್ದವರು ಮಾತ್ರ ಮನೆಯಿಂದ ಹೊರ ಬಂದಿದ್ದು ಕಂಡುಬಂತು. ಸದಾ ಜನರಿಂದ ತುಂಬಿರುತ್ತಿದ್ದ ಹಳೇ ಬಸ್ ನಿಲ್ದಾಣ, ದೇವಿಕೆರೆ, ಅಶ್ವಿನಿ ವೃತ್ತ, ನಿಲೇಕಣಿ ಸರ್ಕಲ್, ಐದು ರಸ್ತೆ ವೃತ್ತಗಳು ಖಾಲಿ ಖಾಲಿಯಾಗಿ ಕಾಣುತ್ತಿದ್ದವು. ಈ ಬಾರಿ ಪೊಲೀಸರ ಬಿಗಿಯಾದ ಕಾವಲು ಇಲ್ಲದೆ ಸಹ ಜನರೇ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್ ನಿಯಮ ಪಾಲಿಸಿದರು. ಜನರಿಲ್ಲದ ರಸ್ತೆಗಳಲ್ಲಿ ಬಿಸಿಲು ನೆರಳಿನಾಟ ಮಾತ್ರ ಕಾಣುತ್ತಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.