ADVERTISEMENT

ಕಾರವಾರ | ಬೀಡಾಡಿ ದನಗಳ ಹೆಚ್ಚಳ: ಇನ್ನೂ ಬಾಗಿಲು ತೆರೆಯದ ಗೋಶಾಲೆ

ಬಿಗಡಾಯಿಸಿದ ಅಪಘಾತ ಸಮಸ್ಯೆ

ಗಣಪತಿ ಹೆಗಡೆ
Published 6 ನವೆಂಬರ್ 2025, 5:52 IST
Last Updated 6 ನವೆಂಬರ್ 2025, 5:52 IST
ಕಾರವಾರ ತಾಲ್ಲೂಕಿನ ಕಣಸಗಿರಿಯಲ್ಲಿ ನಿರ್ಮಾಣಗೊಂಡಿರುವ ಗೋಶಾಲೆ
ಕಾರವಾರ ತಾಲ್ಲೂಕಿನ ಕಣಸಗಿರಿಯಲ್ಲಿ ನಿರ್ಮಾಣಗೊಂಡಿರುವ ಗೋಶಾಲೆ   

ಕಾರವಾರ: ಬೀಡಾಡಿ ದನಗಳ ಹೆಚ್ಚಳದಿಂದ ರಸ್ತೆ ಅಪಘಾತ ಏರಿಕೆಯಾಗುತ್ತಿರುವುದು ಒಂದೆಡೆಯಾದರೆ, ಅವುಗಳ ನಿಯಂತ್ರಣಕ್ಕೆ ಸರ್ಕಾರ ಆರಂಭಿಸಿದ ಗೋಶಾಲೆ ನಿರ್ಮಾಣಗೊಂಡರೂ ಬಳಕೆಗೆ ಸಿಗದಿರುವುದು ಸಮಸ್ಯೆ ಬಿಗಡಾಯಿಸುತ್ತಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಮಾಜಾಳಿ, ಸದಾಶಿವಗಡ ಸೇರಿದಂತೆ ಗುಂಪು ಗುಂಪಾಗಿ ಬೀಡಾಡಿ ದನಗಳು ಮಲಗುತ್ತಿದ್ದು ನಿತ್ಯ ಅಪಘಾತಗಳಿಗೆ ಕಾರಣವಾಗುತ್ತಿವೆ.

ಬೀಡಾಡಿ ದನಗಳನ್ನು ಸೆರೆಹಿಡಿದು, ಪೋಷಿಸಲು ಅನುಕೂಲವಾಗುವಂತೆ ಚಿತ್ತಾಕುಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಸಗಿರಿಯಲ್ಲಿ ಸ್ಥಾಪಿಸಿದ ಗೋಶಾಲೆ ಇನ್ನೂ ಬಾಗಿಲು ತೆರೆದಿಲ್ಲ. ಇದರಿಂದ ಬೀಡಾಡಿ ದನಗಳನ್ನು ಕೂಡಿ ಹಾಕುವುದೆಲ್ಲಿ? ಎಂಬ ಪ್ರಶ್ನೆ ಎದುರಾಗಿದೆ.

ADVERTISEMENT

ಬೀಡಾಡಿ ಗೋವುಗಳನ್ನು ರಸ್ತೆ ಅಪಘಾತ, ಗೋವು ಕಳ್ಳರಿಂದ ರಕ್ಷಿಸುವ ಸಲುವಾಗಿ ಗೋಶಾಲೆಗಳನ್ನು ಸ್ಥಾಪಿಸಲು 2021ರಲ್ಲಿ ಯೋಜನೆ ರೂಪಿಸಲಾಗಿತ್ತು. 2022–23ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದು ಗೋಶಾಲೆ ಸ್ಥಾಪಿಸಲು ಮುಂದಾಗಿದ್ದ ಸರ್ಕಾರ ಜಿಲ್ಲೆಗೆ ಹೆಚ್ಚುವರಿಯಾಗಿ ನಾಲ್ಕು ಗೋಶಾಲೆಗಳನ್ನು ಮಂಜೂರು ಮಾಡಿತ್ತು. ಮೂರು ವರ್ಷ ಕಳೆದ ಬಳಿಕವೂ ಗೋಶಾಲೆ ಪೂರ್ಣ ಪ್ರಮಾಣದಲ್ಲಿ ನಿರ್ಮಿಸಿಲ್ಲ. ಕೆಲ ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟನೆ ಮಾಡಿದ್ದಾರೆ. ಆದರೆ, ಇನ್ನೂ ಗೋಶಾಲೆ ಬಳಕೆಗೆ ಸಿಗುತ್ತಿಲ್ಲ.

‘ಸದಾಶಿವಗಡ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆ ಬೀಡಾಡಿ ಗೋವುಗಳ ಸಂಖ್ಯೆ ಮಿತಿಮೀರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಇಲ್ಲಿ ಹಾದುಹೋಗಿರುವುದರಿಂದ ರಾತ್ರಿ ವೇಳೆ ಗೋವುಗಳು ಹೆದ್ದಾರಿಯ ಮೇಲೆ ಮಲಗುತ್ತಿವೆ. ಅವುಗಳಿಗೆ ಬಡಿದು ವಾಹನಗಳು ಅಪಘಾತಕ್ಕೆ ಈಡಾಗುತ್ತಿದ್ದು, ಗೋವುಗಳೂ ಮೃತಪಡುತ್ತಿವೆ. ನಿತ್ಯ ಗ್ರಾಮ ಪಂಚಾಯಿತಿಗೆ ಗೋವುಗಳ ಕಳೇಬರ ಸಾಗಿಸುವದೇ ಕೆಲಸವಾಗುತ್ತಿದೆ’ ಎನ್ನುತ್ತಾರೆ ಚಿತ್ತಾಕುಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೂರಜ್ ದೇಸಾಯಿ.

‘ಹಿಂದಿನ ಸರ್ಕಾರ ಬೀಡಾಡಿ ಗೋವುಗಳ ರಕ್ಷಣೆಗೆ ಗೋಶಾಲೆ ನಿರ್ಮಿಸುವ ಯೋಜನೆ ಕೈಗೊಂಡಿತ್ತು. ಈಗಿನ ಸರ್ಕಾರ ಯೋಜನೆ ಪೂರ್ಣಗೊಳಿಸಿದರೂ ಗೋಶಾಲೆ ತೆರೆಯಲು ಮುಂದಾಗುತ್ತಿಲ್ಲ. ಸಚಿವರು ಕೇವಲ ಪ್ರಚಾರಕ್ಕಾಗಿ ಗೋಶಾಲೆ ಉದ್ಘಾಟಿಸಿದ್ದಾರೆ’ ಎಂಬುದು ಅವರ ದೂರು.

ನಿರ್ವಹಣೆಗೆ ಅಲ್ಪ ಅನುದಾನ!

‘ಹಳಿಯಾಳದ ದುಸಗಿಯಲ್ಲಿ ಜಿಲ್ಲೆಯ ಏಕೈಕ ಸರ್ಕಾರಿ ಗೋಶಾಲೆ ಕಾರ್ಯನಿರ್ವಹಿಸುತ್ತಿದೆ. ಗರಿಷ್ಠ 80 ಗೋವುಗಳನ್ನು ಸಲಹಬಹುದಾದ ಈ ಗೋಶಾಲೆಯಲ್ಲಿ ಸದ್ಯ 151 ಬೀಡಾಡಿ ಗೋವುಗಳಿಗೆ ಆಸರೆ ನೀಡಲಾಗಿದೆ. ಅವುಗಳ ನಿರ್ವಹಣೆಗೆ ತಿಂಗಳಿಗೆ ಸರಾಸರಿ ₹7 ಲಕ್ಷ ಬೇಕು. ಸದ್ಯ ಸರ್ಕಾರವು ₹22 ಲಕ್ಷ ಅನುದಾನ ಬಿಡುಗಡೆ ಮಾಡಿದೆ’ ಎಂದು ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಮೋಹನ ಕುಮಾರ್ ತಿಳಿಸಿದರು.

ನಿರ್ಮಿತಿ ಕೇಂದ್ರ ಇನ್ನೂ ಗೋಶಾಲೆ ಕಟ್ಟಡ ಪೂರ್ಣಗೊಳಿಸಿಲ್ಲ. ಬಾಕಿ ಇರುವ ಸಣ್ಣಪುಟ್ಟ ಕೆಲಸ ಪೂರ್ಣಗೊಳಿಸಿ ಹಸ್ತಾಂತರಿಸಲು ಸೂಚನೆ ನೀಡಲಾಗಿದೆ.
-ಡಾ.ಮೋಹನ ಕುಮಾರ್, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.