ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಕಾಂಗ್ರೆಸ್ ಶಾಸಕ ಎಲ್.ಬಿ.ಪಿ. ಭೀಮ ನಾಯ್ಕ ಅವರು ಶಿಕ್ಷಕರ ದಿನಾಚರಣೆ ಅಂಗವಾಗಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿಕ್ಷಕರಿಗೆ ಬೆಳ್ಳಿ ನಾಣ್ಯ ಕಾಣಿಕೆ ರೂಪದಲ್ಲಿ ನೀಡಿದ್ದಾರೆ.
ತಾಲ್ಲೂಕು ಆಡಳಿತದಿಂದ ಸೋಮವಾರ ಪಟ್ಟಣದಲ್ಲಿ ಶಿಕ್ಷಕರ ದಿನಾಚರಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲೇ ಶಾಸಕರು ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ, ನಿವೃತ್ತ ಶಿಕ್ಷಕರಿಗೆ ನಾಣ್ಯ ವಿತರಿಸಿದ್ದಾರೆ. ನಾಣ್ಯ ಏಳು ಗ್ರಾಂ ತೂಕ ಹೊಂದಿದೆ.
ನಾಣ್ಯದ ಒಂದು ಬದಿಯಲ್ಲಿ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವಿದ್ದರೆ, ಇನ್ನೊಂದು ಬದಿಯಲ್ಲಿ ಶಾಸಕರ ಹೆಸರಿದೆ.
‘ಕೋವಿಡ್ನಿಂದ ಎರಡು ವರ್ಷ ಶಿಕ್ಷಕರ ದಿನ ಆಚರಿಸಿರಲಿಲ್ಲ. ಶಿಕ್ಷಕರಿಗೆ ಗೌರವ ಸಲ್ಲಿಸಲು ಕ್ಷೇತ್ರದ ಎಲ್ಲ ಶಿಕ್ಷಕರಿಗೆ ಬೆಳ್ಳಿ ನಾಣ್ಯ ನೀಡಲಾಗಿದೆ. ಇದರಲ್ಲಿ ಬೇರೆ ಉದ್ದೇಶ ಇಲ್ಲ’ ಎಂದು ಭೀಮ ನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
‘ಈ ರೀತಿ ದೇಣಿಗೆ, ಕಾಣಿಕೆ ಕೊಡುವುದು ಇದ್ದರೆ ಅನುಮತಿ ಪಡೆಯಬೇಕು. ರಾಜ್ಯ ಸರ್ಕಾರಿ ನೌಕರರು ₹5 ಸಾವಿರಕ್ಕಿಂತ ಮೇಲಿನ ಕಾಣಿಕೆ ಪಡೆಯಬೇಕಾದರೆ ಅನುಮತಿ ಪಡೆಯಬೇಕಾಗುತ್ತದೆ. ಡಿ.ಡಿ.ಪಿ.ಐ.ಗೆ ವಿಷಯ ತಿಳಿಸಿದ್ದರೋ ಅಥವಾ ಇಲ್ಲವೋ ನನಗೆ ಗೊತ್ತಿಲ್ಲ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ತಿಳಿಸಿದರು.
‘ಬೆಳ್ಳಿ ನಾಣ್ಯ ವಿತರಿಸಿದ ವಿಷಯ ನನಗೆ ಗೊತ್ತಿಲ್ಲ. ನಮ್ಮಿಂದ ಅನುಮತಿಯೂ ಪಡೆದಿಲ್ಲ’ ಎಂದು ಡಿ.ಡಿ.ಪಿ.ಐ. ಜೆ. ಕೊಟ್ರೇಶ್ ಪ್ರತಿಕ್ರಿಯಿಸಿದರು.
ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.