ADVERTISEMENT

ಕುರುವತ್ತಿ ಜಾತ್ರೆಯಲ್ಲಿ ಸೌಲಭ್ಯಗಳ ಕೊರತೆ: ಭಕ್ತರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 2:15 IST
Last Updated 19 ಫೆಬ್ರುವರಿ 2026, 2:15 IST
ಹೂವಿನಹಡಗಲಿ ಬಳಿಯ ಕುರುವತ್ತಿ ಸುಕ್ಷೇತ್ರದಲ್ಲಿ ಹರಕೆ ತೀರಿಸಿದ ಮಹಿಳಾ ಭಕ್ತರ ಸ್ನಾನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡದಿರುವುದು
ಹೂವಿನಹಡಗಲಿ ಬಳಿಯ ಕುರುವತ್ತಿ ಸುಕ್ಷೇತ್ರದಲ್ಲಿ ಹರಕೆ ತೀರಿಸಿದ ಮಹಿಳಾ ಭಕ್ತರ ಸ್ನಾನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡದಿರುವುದು   

ಹೂವಿನಹಡಗಲಿ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಕುರುವತ್ತಿಯಲ್ಲಿ ಮೂಲಸೌಕರ್ಯಗಳು ಸಮರ್ಪಕವಾಗಿ ದೊರೆಯದೇ ಜಾತ್ರೆಯಲ್ಲಿ ತೊಂದರೆ ಅನುಭವಿಸುವಂತಾಯಿತು ಎಂದು ಭಕ್ತರು ದೂರಿದ್ದಾರೆ.

ಕುರುವತ್ತಿ ಸುಕ್ಷೇತ್ರದಲ್ಲಿ ಮಂಗಳವಾರ ಜರುಗಿದ ಬಸವೇಶ್ವರ ರಥೋತ್ಸವದಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು. ಹೂವಿನಹಡಗಲಿ ತಾಲ್ಲೂಕು ಸೇರಿದಂತೆ ನೆರೆಯ ಜಿಲ್ಲೆಯ ಭಕ್ತರು ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಾಟಾ ಏಸ್‌ಗಳಲ್ಲಿ ಬಂದು ಜಾತ್ರಾ ಮೈದಾನದಲ್ಲಿ ವಾಸ್ತವ್ಯ ಹೂಡಿದ್ದರು. ದೇವಸ್ಥಾನ ಸಮಿತಿ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇದ್ದುದರಿಂದ ಅವ್ಯವಸ್ಥೆಗಳು ಕಂಡು ಬಂದವು.

ಬಸವೇಶ್ವರ ದೇವಸ್ಥಾನ ಆವರಣ ಹಾಗೂ ಯಾತ್ರಿ ನಿವಾಸದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಜಾತ್ರೆಗೂ ಮುನ್ನವೇ ಕೆಟ್ಟಿದ್ದರೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಅವುಗಳನ್ನು ದುರಸ್ತಿ ಮಾಡಿಸಿರಲಿಲ್ಲ. ಹೀಗಾಗಿ ಶುದ್ಧ ಕುಡಿಯುವ ನೀರಿಗೆ ಭಕ್ತರು ಅಲೆಯುವಂತಾಯಿತು.

ADVERTISEMENT

ಬಸವೇಶ್ವರ ದೇವಸ್ಥಾನದ ಯಾತ್ರಿ ನಿವಾಸದಲ್ಲಿರುವ ಮಹಿಳಾ ಶೌಚಾಲಯಗಳಿಗೆ ಬೀಗ ಹಾಕಲಾಗಿತ್ತು. ಅಲ್ಲಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು ಅಳವಡಿಸಿದ್ದರೂ ಭಕ್ತರ ಸಂಖ್ಯೆಗೆ ತಕ್ಕಷ್ಟು ಇರಲಿಲ್ಲ. ಹೀಗಾಗಿ ಭಕ್ತರು ತಂಬಿಗೆ ಹಿಡಿದು ಬಯಲು ಬಹಿರ್ದೆಸೆಗೆ ಹೋಗುತ್ತಿದ್ದರು. ನದಿ ತೀರದ ಪರಿಸರವಂತೂ ದುರ್ನಾತ ಬೀರುವಂತಿತ್ತು.

ದೀಡು ನಮಸ್ಕಾರ ಹರಕೆ ತೀರಿಸಿದ ಮಹಿಳೆಯರು ಬಯಲಲ್ಲೇ ಸ್ನಾನ ಮಾಡಿ ಬಟ್ಟೆ ಬದಲಾಯಿಸುವಂತಾಯಿತು. ದೇವಸ್ಥಾನ ಸಮಿತಿಯು ಶಾಮಿಯಾನ, ಸುತ್ತು ಪರದೆ ವ್ಯವಸ್ಥೆಯನ್ನಾದಾರೂ ಮಾಡಬೇಕಿತ್ತು ಎಂದು ಭಕ್ತರು ಅಸಮಾಧಾನ ತೋಡಿಕೊಂಡರು.

ಸುಗಮ ಸಂಚಾರ ವ್ಯವಸ್ಥೆಗೆ ಪ್ರಶಂಸೆ: ಪ್ರತಿ ವರ್ಷ ಕುರುವತ್ತಿ ಜಾತ್ರೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಭಕ್ತರು ತೊಂದರೆ ಅನುಭವಿಸುತ್ತಿದ್ದರು. ಈ ಬಾರಿ ಎಲ್ಲಿಯೂ ಟ್ರಾಫಿಕ್ ಕಿರಿಕಿರಿ ಆಗದಂತೆ ನೋಡಿಕೊಂಡ ಪೊಲೀಸರ ಕಾರ್ಯವನ್ನು ಭಕ್ತರು ಪ್ರಶಂಸಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಖುದ್ದಾಗಿ ನೀಲನಕ್ಷೆ ತಯಾರಿಸಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಗಮನಹರಿಸಿದ್ದರು. ಖಾಸಗಿ ಬಸ್, ಇತರೆ ವಾಹನಗಳನ್ನು ಹೊರ ವಲಯದಲ್ಲೇ ತಡೆದು ನಿಲ್ಲಿಸಿದ್ದರಿಂದ ಸಂಚಾರ ದಟ್ಟಣೆ ಕಂಡು ಬರಲಿಲ್ಲ. ಜಾತ್ರೆಯಲ್ಲಿ ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿತ್ತು.

ಕುರುವತ್ತಿ ಯಾತ್ರಿ ನಿವಾಸದಲ್ಲಿನ ಮಹಿಳಾ ಶೌಚಾಲಯಗಳಿಗೆ ಬೀಗ ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.