ಹಗರಿಬೊಮ್ಮನಹಳ್ಳಿ: ‘ರೈತರು ಮತ್ತು ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಹಳೆಯ ದಾಖಲೆಗಳನ್ನು ಪಡೆಯುವಲ್ಲಿ ಉಂಟಾಗುವ ವಿಳಂಬ ತಡೆಯಲು ಸರ್ಕಾರ ದಾಖಲೆಗಳ ಡಿಜಟಲೀಕರಣ ಮಾಡಿದೆ’ ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
ಪಟ್ಟಣದ ಆಡಳಿತ ಸೌಧದಲ್ಲಿ ಭೂ ದಾಖಲೆಗಳ ಡಿಜಟಲೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಹಳೆಯ ದಾಖಲೆಗಳನ್ನು ಸಂಗ್ರಹಿಸಿ ಬಹುದಿನಗಳ ಕಾಲ ರಕ್ಷಿಸಲು ತೊಂದರೆಯಾಗುತ್ತಿತ್ತು. ಕೆಲವು ದಿನಗಳ ಬಳಿಕ ಹಾಳಾಗುತ್ತಿದ್ದವು. ಈಗ ಡಿಜಟಲೀಕರಣದ ಸ್ಪರ್ಶದಿಂದ ಯಾವುದೇ ದಾಖಲೆಗಳಿಗೆ ಹಾನಿಯಾಗುವುದಿಲ್ಲ’ ಎಂದು ತಿಳಿಸಿದರು.
ತಹಶೀಲ್ದಾರ್ ಆರ್.ಕವಿತಾ ಮಾತನಾಡಿ, ‘ಭೂ ದಾಖಲೆಗಳನ್ನು ಕಂಪ್ಯೂಟರ್ ಸ್ಕ್ಯಾನ್ ಮಾಡಿ ಶಾಶ್ವತವಾಗಿ ಮತ್ತು ಸುಲಭವಾಗಿ ರೈತರಿಗೆ ದೊರೆಯುತ್ತದೆ. ಸಾರ್ವಜನಿಕರು, ರೈತರು ಇನ್ನುಮುಂದೆ ಕಡಿಮೆ ಅವಧಿಯಲ್ಲಿಯೇ ಅಗತ್ಯ ದಾಖಲೆಗಳನ್ನು ಪಡೆಯಬಹುದು. ಡಿಜಿಟಿಲ್ನಿಂದಾಗಿ ಭೂ ಒಡೆತನದ ದಾಖಲೆಗಳು ರೈತರ ಬಳಿ ಶಾಶ್ವತವಾಗಿ ಉಳಿಯುತ್ತವೆ’ ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಸೂರ್ಯಬಾಬು, ನಾಣ್ಯಾಪುರ ಕೃಷ್ಣಮೂರ್ತಿ, ಉಪ ತಹಶೀಲ್ದಾರ್ ಶಿವಕುಮಾರಗೌಡ, ಗ್ರಾಮ ಆಡಳಿತಾಧಿಕಾರಿಗಳ ಸಂಘದ ದೇವೇಂದ್ರಪ್ಪ, ಚೇತನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.