
ಹೊಸಪೇಟೆ (ವಿಜಯನಗರ): ಪರಂಪರೆ, ಪ್ರವಾಸೋದ್ಯಮ ಹಾಗೂ ಆರೋಗ್ಯ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಹಂಪಿಯ ಗಾಯತ್ರಿ ಪೀಠ ಸಮೀಪದಿಂದ ತಳವಾರಘಟ್ಟ ತನಕ ಭಾನುವಾರ ಬೆಳಿಗ್ಗೆ ಪಾರಂಪರಿಕ ಓಟ (ಹರಿಟೇಜ್ ರನ್) ನಡೆದಿದ್ದು, ಜಪಾನ್ನ 7, ಅಮೆರಿಕದ 3 ಮಂದಿ ಪ್ರವಾಸಿಗರ ಸಹಿತ ನೂರಾರು ಮಂದಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಓಟಕ್ಕೆ ಚಾಲನೆ ನೀಡಿದರು. ಎಸ್ಪಿ ಎಸ್.ಜಾಹ್ನವಿ, ಡಿವೈಎಸ್ಪಿ ಟಿ.ಮಂಜುನಾಥ್ ಇದ್ದರು.
ಓಟಗಾರರು ಕೃಷ್ಣ ದೇವಸ್ಥಾನ, ಕೃಷ್ಣ ಬಜಾರ್, ಶ್ರೀ ಚಂಡಿಕೇಶ್ವರ ಗುಡಿ, ಶಿವ ದೇವಾಲಯ, ರಾಣಿ ಸ್ನಾನಗೃಹ ಹಾಗೂ ತಳವಾರ್ ಘಟ್ಟ ಮೂಲಕ ಐತಿಹಾಸಿಕ ಸ್ಮಾರಕಗಳನ್ನು ದಾಟಿ ಓಟ ಪೂರ್ಣಗೊಳಿಸಿದರು.
375 ಮಹಿಳೆಯರು ಭಾಗವಹಿಸಿದ್ದರು. ಹಂಪಿ, ಹೊಸಪೇಟೆ, ಬಳ್ಳಾರಿ, ಗಂಗಾವತಿ, ಕಂಪ್ಲಿ ಸೇರಿದಂತೆ ಸ್ಥಳೀಯರು ಭಾಗವಹಿಸುವುದರ ಜೊತೆಗೆ ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ, ನವದೆಹಲಿ, ದಾವಣಗೆರೆ, ತಿರುಪತಿ ಮೊದಲಾದ ನಗರಗಳಿಂದಲೂ ಓಟಗಾರರು ಆಗಮಿಸಿದ್ದರು. ಬೆಂಗಳೂರುದಿಂದ 300, ಹೈದರಾಬಾದ್ನಿಂದ 175 ಹಾಗೂ ಹಂಪಿ–ಹೊಸಪೇಟೆ ಪ್ರದೇಶದಿಂದ 350 ಮಂದಿ ಭಾಗವಹಿಸಿದ್ದರು.
‘ಗೋ ಹೆರಿಟೇಜ್ ರನ್’ 2014ರಲ್ಲಿ ಆರಂಭಗೊಂಡಿತ್ತು. ಕೋವಿಡ್ ಕಾರಣಕ್ಕೆ 2022ರಿಂದೀಚೆಗೆ ನಡೆದಿರಲಿಲ್ಲ. ಈ ಬಾರಿ 51ನೇ ಓಟವಾಗಿದ್ದು, ಹಂಪಿಯಲ್ಲಿ ನಡೆದ 9ನೇ ಆವೃತ್ತಿಯಾಗಿದೆ.
ಎಂಎಸ್ಪಿಎಲ್ ಜೆಎಂಡಿ ರಾಹುಲ್ ಬಲ್ಡೋಟಾ, ಶಾಸಕರ ಪುತ್ರ ಎಚ್.ಜಿ.ಗುರುದತ್, ಹಂಪಿಯ ಬೌಲ್ಡರ್ಸ್ ರೆಸಾರ್ಟ್ನ ಅನ್ನಪೂರ್ಣ, ಹೊಸಪೇಟೆ ರೌಂಡ್ ಟೇಬಲ್ ಸಂಸ್ಥೆಯ ಅಧ್ಯಕ್ಷ ಅಮಿತ್ ಜೈನ. ಉಪಾಧ್ಯಕ್ಷ ಹೇಮತ್ ಜೈನ. ಕಾರ್ಯದರ್ಶಿ ವಿಶ್ವನಾಥ್ ಕುಲಕರ್ಣಿ, ವಿಮಲ್ ಜೈನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.