ಹಂಪಿ ಉತ್ಸವದಲ್ಲಿ ಗಾಯಕ ರಾಜೇಶ್ ಕೃಷ್ಣನ್ ಗಾಯನ
ಹೊಸಪೇಟೆ (ವಿಜಯನಗರ): ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮಾನಸ ಪುತ್ರನೆಂದೇ ಖ್ಯಾತರಾಗಿರುವ, ಮಾಧುರ್ಯ ದೊರೆ ಎಂದೂ ಕರೆಸಿಕೊಂಡಿರುವ ರಾಜೇಶ್ ಕೃಷ್ಣನ್ ಹಂಪಿ ಉತ್ಸವದ ಮೊದಲ ದಿನವೇ ಮಧ್ಯರಾತ್ರಿಯಲ್ಲಿ ದೂಳೆಬ್ಬಿಸಿಬಿಟ್ಟರು. ಸತತ ಒಂದೂವರೆ ಗಂಟೆ ಹಾಡುತ್ತ, ಪ್ರೇಕ್ಷಕರನ್ನು ಕುಣಿಸುತ್ತ ತಾವೂ ಸಂತೋಷದಲ್ಲಿ ತೇಲಾಡಿದರು.
ತಮಗೆ ಇಷ್ಟವಾದ ‘ಉಸಿರೆ, ಉಸಿರೆ, ಉಸಿರಕೊಲ್ಲಬೇಡ..’ ಹಾಡನ್ನು ಆರಂಭದಲ್ಲೇ ಪ್ರೇಕ್ಷಕರು ಉಸಿರು ಬಿಗಿಹಿಡಿದುಬಿಡವಂತೆ ಹಾಡಿಬಿಟ್ಟ ರಾಜೇಶ್, ಬಳಿಕ ತಮ್ಮದೇ ಹವಾ ಎಂದು ಒಂದೂಕಾಲು ಗಂಟೆ ಹಂಪಿಯ ಸುತ್ತಮುತ್ತಲಿನ ಬಂಡೆಗಳಿಗೆ ಧ್ವನಿ ಅಪ್ಪಳಿಸಿಬಿಟ್ಟರು. ‘ಯಾರೋ, ಕಣ್ಣಿನಲ್ಲಿ ಕಣ್ಣನಿಟ್ಟು’ ಹಾಡನ್ನು ನೃತ್ಯಗಾರರ ಹಿನ್ನೆಲೆಯಲ್ಲಿ ಹಾಡಿದ ಅವರು, ಎಸ್ಪಿಬಿ ಅವರ ‘ಜತೆಯಲಿ, ಜತೆಜತೆಯಲಿ’ ಹಾಡನ್ನು ಅನುರಾಧಾ ಭಟ್ ಜತೆಯಲ್ಲಿ ಹಾಡಿ ಮೋಡಿ ಮಾಡಿದರು.
ಹಿನ್ನೆಲೆ ಸಂಗೀತ ಇಲ್ಲದೆಯೇ ಹಲವು ಗೀತೆಗಳ ಒಂದೆರೆಡು ಪಲ್ಲವಿಗಳನ್ನು ಹಾಡಿ, ಪ್ರೇಕ್ಷಕರಿಂದ ಹಾಡಿಸಿದ ಬಗೆ ಅದ್ಭುತವಾಗಿತ್ತು. ‘ಕಾಣದಂತೆ ಮಾಯವಾದನು’ ಹಾಡಿಗೆ ತಾವು, ಸಹ ಹಾಡುಗಾರರು ಕುಣಿದುದು ಮಾತ್ರವಲ್ಲ, ಪ್ರೇಕ್ಷಕರನ್ನೂ ಕುಣಿಸಿಬಿಟ್ಟರು.
ಇದಕ್ಕೆ ಮೊದಲು ಅನುರಾಧಾ ಭಟ್ ಅವರು ‘ಅಪ್ಪಾ ಐ ಲವ್ಯುಪಾ’ ಹಾಡು ಹೇಳಿದಾಗ ಇಡೀ ಜನಸಮೂಹ ಭಾವಪರವಶವಾಯಿತು.
ತಾರಾ ಜೋಡಿ: ಚಿತ್ರ ನಿರ್ದೇಶಕ ತರುಣ್ ಸುಧೀರ್, ಸೋನಲ್ ಮೊಂತೆರೊ ಜೋಡಿ ವೇದಿಕೆಗೆ ಬಂದಾಗ ಪ್ರೇಕ್ಷಕರು ಪುಳಕಿತರಾದರು. ಇಬ್ಬರೂ ಸವಿನುಡಿ ನುಡಿದ ಒಂದು ಹಾಡನ್ನೂ ಹಾಡಿ, ಒಂದು ಚಿಕ್ಕ ನೃತ್ಯವನ್ನೂ ಮಾಡಿಬಿಟ್ಟರು. ‘ನಾನು ಹುಟ್ಟಿದ್ದು ಹೊಸಪೇಟೆಯಲ್ಲಿ. ಇದು ನನ್ನ ತವರು ನೆಲ. ನಿಮ್ಮ ಪ್ರೀತಿ ಇದ್ದರೆ ಮೂರಲ್ಲ ನೂರು ಹಿಟ್ ಸಿನಿಮಾಗಳನ್ನು ನೀಡುತ್ತೇನೆ’ ಎಂದು ಹೇಳಿದಾಗ ಜನ ಶಿಳ್ಳೆ ಹೊಡೆದು ಅಭಿನಂದಿಸಿದರು.
ಇದಕ್ಕೆ ಮೊದಲು ವೈಷ್ಣವಿ ಗೌಡ, ಬೇಬಿ ಸಿಹಿ, ಭವ್ಯಾ ಗೌಡ ಅವರು ಪುನೀತ್ ರಾಜ್ಕುಮಾರ್ ಭಾವಚಿತ್ರ ಹಿಡಿದು ಮಾಡಿದ ನೃತ್ಯ ಅದ್ಭುತವಾಗಿತ್ತು. ಕಡಬಗೆರೆ ಮುನಿರಾಜು ಅವರ ಸಿರಿಕಂಠದಿಂದ ಮೂಡಿಬಂದ ಹಾಡುಗಳೂ ಹಂಪಿಯ ಕಲ್ಲುಬಂಡೆಗಳಿಗೆ ಅಪ್ಪಳಿಸಿ ಮಾರ್ದನಿಸಿದವು.
ಈ ಬಾರಿಯ ಬಿಗ್ಬಾಸ್ ವಿಜೇತ ಹನುಮಂತ ಹಂಪಿಯ ವೇದಿಕೆಯಲ್ಲಿ ತನ್ನ ಎಂದಿನ ಶೈಲಿಯ ಜಾನಪದ ಮತ್ತು ಶಿಶುನಾಳ ಷರೀಫರ ಹಾಡು ಹೇಳಿ ಮೋಡಿ ಮಾಡಿಬಿಟ್ಟರು.
‘ಕೇಳೋ ಜಾಣ ಶಿವಧ್ಯಾನ ಮಾಡಣ್ಣ, ನಿನ್ನೊಳಗೆ ನೀನು ತಿಳಿದು ನೋಡಣ್ಣ, ಬಡವನ ಮಗಳಾದರೂ ಕಪ್ಪಾಗಿರಬಾರದು, ನಿನ್ನ ಮಾರಿ ನೋಡಂಗ ಆಗೈತಿ’ ಹಾಡುಗಳನ್ನು ಹಾಡಿದಾಗ ಜನ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.