ಹೊಸಪೇಟೆ (ವಿಜಯನಗರ): ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಬೆಳಗಾವಿಯಿಂದ ನೇರವಾಗಿ ನಗರಕ್ಕೆ ಬಂದ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಹೊತ್ತು ಚರ್ಚಿಸಿದ ನಂತರ ಇಲ್ಲಿನ 15ನೇ ವಾರ್ಡಿನ ಇಂದಿರಾ ನಗರಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಮಳೆಯಿಂದ ಹಾನಿಗೀಡಾದ ಸುನೀಲ್, ರುಕ್ಮಿಣಿ, ಓಬಳಮ್ಮ ಹಾಗೂ ಮಾರೆಮ್ಮ ಅವರ ಮನೆಗಳನ್ನು ನೋಡಿದರು. ಅವರಿಗೆ ತಲಾ ₹10 ಸಾವಿರ ಪರಿಹಾರ ವಿತರಿಸಿದರು.
ಇಂದಿರಾ ನಗರ ತುಂಬ ಇಕ್ಕಟ್ಟಿನಿಂದ ಕೂಡಿದೆ. ಸ್ವಚ್ಛತೆ ಇಲ್ಲ. ಮಕ್ಕಳಿಗೆ ಆಟವಾಡುವ ಪರಿಸರವೇ ಇಲ್ಲ. ಆಶ್ರಯ ನಿವೇಶನಗಳಿವೆ. ಅಲ್ಲಿ ನಿಮಗೆ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಸ್ಥಳೀಯರೆಲ್ಲರೂ ಚರ್ಚಿಸಿ ಒಮ್ಮತದಿಂದ ಬಂದರೆ ಮುಂದುವರೆಯಲಾಗುವುದು ಎಂದು ಹೇಳಿದರು.
ನಂತರ ಗಾಂಧಿ ನಗರಕ್ಕೂ ಭೇಟಿ ನೀಡಿದರು. ಅನಂತರ ತಾಲ್ಲೂಕಿನ ಮರಿಯಮ್ಮನಹಳ್ಳಿ, ಡಣಾಯಕನಕೆರೆಗೂ ಭೇಟಿ ನೀಡಿದರು.
ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ., ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ನಗರಸಭೆ ಪೌರಾಯುಕ್ತ ಮನೋಹರ್, ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಡಿವೈಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.