
ಹೊಸಪೇಟೆ (ವಿಜಯನಗರ): ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಧ್ಯೇಯ, ಉದ್ದೇಶಗಳ ಕುರಿತು 23 ದೇಶಗಳಲ್ಲಿ ಪ್ರಚಾರದಲ್ಲಿ ತೊಡಗಿರುವ ಪ್ರಚಾರಕರು, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ನೇತೃತ್ವದಲ್ಲಿ ಬುಧವಾರ ಹಂಪಿಯ ವಿಜಯ ವಿಠ್ಠಲ ದೇವಸ್ಥಾನಕ್ಕೆ ಭೇಟಿ ನೀಡಿದರು.
ಹಂಪಿ ಸಮೀಪದ ಆನೆಗೊಂದಿಯಲ್ಲಿ ನಡೆಯುವ ಮೂರು ದಿನಗಳ ಚಿಂತನ ಮಂಥನ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಅವರು, ಸಭೆಯ ನಡುವೆ ಬಿಡುವು ಮಾಡಿಕೊಂಡು ಹಂಪಿಗೆ ಭೇಟಿ ನೀಡಿದರು.
‘ಅಮೆರಿಕ, ಕೆನಡಾ, ದುಬೈ, ನೈಜೀರಿಯಾ, ಮ್ಯಾನ್ಮಾರ್ ಸೇರಿ 23 ದೇಶಗಳಲ್ಲಿ ಅವರು ಪ್ರಚಾರಕರಾಗಿ ದ್ದಾರೆ. ಅವರೆಲ್ಲ ವಿದೇಶದಲ್ಲೇ ಹುಟ್ಟಿದ ಭಾರತೀಯ ಮೂಲದವರು. ವಿಶ್ವ ಪಾರಂಪರಿಕ ತಾಣ ಹಂಪಿಯ ದರ್ಶನದ ಜತೆಗೆ ಇಲ್ಲೇ ಆರ್ಎಸ್ಎಸ್ ಕುರಿತಂತೆ ಅವರಿಗೆ ಇನ್ನಷ್ಟು ಮಾಹಿತಿ ಒದಗಿಸಲು ಈ ಸಭೆ ಆಯೋಜಿಸಲಾಗಿದೆ, ಇದಕ್ಕೆ ಸ್ಥಳೀಯ ಸ್ವಯಂಸೇವಕರು, ಮುಖಂಡರು ಸೇರಿ ಯಾರಿಗೂ ಪ್ರವೇಶ ಇಲ್ಲ’ ಎಂದು ಸಂಘದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಆರ್ಎಸ್ಎಸ್ ಈಗ ಶತಮಾನೋತ್ಸವ ಆಚರಿಸುತ್ತಿದೆ. ವಿದೇಶಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆರ್ಎಸ್ಎಸ್ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲು ಈ ಸಭೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.