
ಕುರಿಗಾಹಿನ ಕೊಂದಿದ್ದ ಕರಡಿ ಜನರಿಂದ ಹಿಗ್ಗಾಮುಗ್ಗ ಹೊಡೆತ ತಿಂದು ಪ್ರಾಣ ಬಿಟ್ಟಿತು!
ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಗುಡೇಕೋಟೆಯ ಹಾಲಸಾಗರ ಬಳಿ ಸೋಮವಾರ ಮಧ್ಯಾಹ್ನ ಮೇಕೆ ಕಾಯುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿ ಸ್ಥಳದಲ್ಲೇ ಸಾಯಿಸಿದೆ. ಇದರಿಂದ ರೊಚ್ಚಿಗೆದ್ದ ಜನರು ಅದೇ ಕರಡಿಯನ್ನು ಹೊಡೆದು ಕೊಂದಿದ್ದಾರೆ.
ಹಾಲಸಾಗರದ ಜಿ. ಓಬಯ್ಯ(45) ಕರಡಿ ದಾಳಿಯಿಂದ ಮೃತಪಟ್ಟವರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಅವರು ಮೇಕೆಗಳನ್ನು ಮೇಯಿಸಲು ಗ್ರಾಮದ ಹೊರ ವಲಯದಲ್ಲಿ ಹೋಗಿದ್ದಾಗ ಕರಡಿ ದಾಳಿ ಮಾಡಿ ತಲೆ, ಕಾಲು, ಕೈ ಸೇರಿದಂತೆ ದೇಹದ ತುಂಬ ಪರಚಿ ಗಂಭೀರ ಗಾಯಗೊಳಿಸಿದೆ. ಇದರಿಂದ ಓಬಯ್ಯ ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಈ ಕರಡಿ ದಾಳಿ ನಡೆದಿರಬೇಕು ಎಂದು ಶಂಕಿಸಲಾಗಿದೆ. ಸಂಜೆ ಸ್ಥಳೀಯರು ಇದನ್ನು ಗಮನಿಸಿ ಗುಡೇಕೋಟೆ ವಲಯ ಅರಣ್ಯ ಅಧಿಕಾರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಜನ ಆಕ್ರೋಶ: ಕರಡಿ ದಾಳಿ ವಿಷಯ ತಿಳಿದ ಜನರು ಅರಣ್ಯಕ್ಕೆ ಧಾವಿಸಿದರು. ಅಲ್ಲಿಯೇ ಇದ್ದ ಕರಡಿ ಮೇಲೆ ದೊಣ್ಣೆ, ಬಡಿಗೆಗಳಿಂದ ಹಿಗ್ಗಾಮುಗ್ಗ ಹೊಡೆದು ಕೊಂದು ಹಾಕಿದರು. ಅವರು ಹೊಡೆದು ಸಾಯಿಸುತ್ತಿರುವ ವಿಡಿಯೊ ಸಹ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.