ADVERTISEMENT

ಕಬ್ಬಿನ ಇಳುವರಿ ಆಧಾರದಲ್ಲಿ ಟನ್‌ಗೆ ₹5,500 ನೀಡಿ: ಕಬ್ಬು ಬೆಳೆಗಾರರ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 12:57 IST
Last Updated 6 ನವೆಂಬರ್ 2025, 12:57 IST
   

ಹೊಸಪೇಟೆ (ವಿಜಯನಗರ): ‘ಕಬ್ಬಿನಲ್ಲಿ ಶೇ 9.50 ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬಿಗೆ ₹5,500  ಬೆಂಬಲ ಬೆಲೆ ನಿಗದಿಪಡಿಸಿ ದೇಶದ ಐದು ಕೋಟಿ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕು’ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಹೊಸಪೇಟೆ ತಾಲ್ಲೂಕು ಘಟಕ ಒತ್ತಾಯಿಸಿದೆ.

ಸಂಘದ ಕಾರ್ಯದರ್ಶಿ ಎನ್‌.ಯಲ್ಲಾಲಿಂಗ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ತೆರಳಿದ ತಂಡ, ಎಡಿಸಿ ಇ.ಬಾಲಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘ಕೃಷಿ ಬೆಲೆ ಆಯೋಗದ ಪ್ರಕಾರ ಒಂದು ಟನ್ ಕಬ್ಬು ಬೆಳೆಯಲು ₹3,580 ಖರ್ಚು ಬರುತ್ತದೆ. ಕೃಷಿ ತಜ್ಞ ಡಾ.ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಉತ್ಪಾದನಾ ವೆಚ್ಚದ ಜೊತೆಗೆ ಶೇಕಡ 50ರಷ್ಟು ಲಾಭಾಂಶ ಸೇರಿಸಿದರೆ ಒಂದು ಟನ್ ಕಬ್ಬಿಗೆ ₹5,370 ಆಗುತ್ತದೆ. ಹಾಗಾಗಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನೀಡುವುದರ ಮೂಲಕ ಮಂಡಿ ಉದ್ದ ಕಬ್ಬು ಎದೆಯುದ್ದ ಸಾಲ ಎಂಬ ಗಾದೆಯನ್ನು ಅಳಿಸಿ ಹಾಕಬೇಕು’ ಎಂದು ಯಲ್ಲಾಲಿಂಗ ಹೇಳಿದ್ದಾರೆ.

ADVERTISEMENT

‘2009ಕ್ಕಿಂತ ಮೊದಲು ಶೇ 8.5ರಷ್ಟು ಸಕ್ಕರೆ ಇಳುವರಿ ಆಧಾರದಲ್ಲಿ ಬೆಂಬಲ ಬೆಲೆ ನಿಗದಿ ಮಾಡುತ್ತಿದ್ದರು. 2010 ರಿಂದ 2018ರವರೆಗೆ ಶೇಕಡ 9.5ಕ್ಕೆ,  2018ರಿಂದ 2022ರ ವರೆಗೆ ಶೇ10ಕ್ಕೆ, 2023ರಿಂದ ಶೇ 10.25 ಸಕ್ಕರೆ ಇಳುವರಿ ಆಧಾರದಲ್ಲಿ ಎಫ್ಆರ್‌ಪಿ ನಿಗದಿ ಮಾಡುತ್ತಾರೆ. ಶೇ ಒಂದರಷ್ಟು ಇಳುವರಿ ಹೆಚ್ಚಾದರೆ ₹332 ಎಫ್‌ಆರ್‌ಪಿ ದರಕ್ಕಿಂತ ಹೆಚ್ಚಾಗಿ ಕೊಡಬೇಕು. ರಾಜ್ಯದಲ್ಲಿ ಶೇ12ರಷ್ಟು ಇಳುವರಿ ಬರುವ ಪ್ರದೇಶಗಳಿವೆ. ಇದೆಲ್ಲವನ್ನೂ ಲೆಕ್ಕ ಹಾಕಿದಾಗ ಒಂದು ಟನ್ ಕಬ್ಬಿಗೆ ಕನಿಷ್ಠ ₹ 4,562 ನೀಡಬೇಕಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

ನಿಯೋಗದಲ್ಲಿ ಜಿ.ಕರೆ ಹನುಮಂತ, ಕೆ.ಕರೆ ಹನುಮಂತ, ವೆಂಕೋಬ ನಾಯಕ, ಎ ಸ್ವಾಮಿ, ಕಣಿವೆಪ್ಪ, ಬಿ.ತಾಯಪ್ಪ ಇತರರು ಇದ್ದರು.

ಇತರ ಬೇಡಿಕೆಗಳು

  • ಕಬ್ಬು ಬೆಳೆಗಾರರ ಸಾಗಣೆ ವೆಚ್ಚ ಕಡಿಮೆಗೊಳಿಸಲು ಹೊಸಪೇಟೆಯಲ್ಲಿ ಸರ್ಕಾರ ಕೊಟ್ಟ ಮಾತಿನಂತೆ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕು.

  • ರಾಜ್ಯ ಸರ್ಕಾರ 2022-23ನೇ ಸಾಲಿಗೆ ಪ್ರತಿ ಟನ್‌ಗೆ ₹150 ಎಸ್ಎಪಿ ನೀಡಲು ಆದೇಶಿಸಿದ್ದು ಅದರ ಬಾಕಿ ಹಣವನ್ನು ರೈತರಿಗೆ ಶೀಘ್ರವಾಗಿ ನೀಡಬೇಕು. ಹರಿಯಾಣ. ಪಂಜಾಬ್ ಮಾದರಿಯಲ್ಲಿ ಎಫ್‌ಆರ್‌ಪಿ ಜೊತೆಗೆ ಅಲ್ಲಿನ ರಾಜ್ಯ ಸರ್ಕಾರ ಪ್ರತಿ ಟನ್‌ಗೆ ₹900 ಎಸ್ಎಪಿ ನಿಗದಿಪಡಿಸಿದೆ. ರಾಜ್ಯದಲ್ಲೂ ಕನಿಷ್ಠ ₹500 ಎಸ್‌ಎಪಿ ನಿಗದಿಪಡಿಸಬೇಕು.

  • ಸಕ್ಕರೆ ಇಳುವರಿ ಪ್ರಕಟಣೆಯಲ್ಲಿ ಮತ್ತು ತೂಕದಲ್ಲಿ ಮೋಸ ನಡೆಯುತ್ತಿದ್ದು. ಇವುಗಳ ಪಾರದರ್ಶಕವಾಗಿ ಪರೀಕ್ಷಿಸಲು ಪ್ರತಿ ಕಾರ್ಖಾನೆ ವ್ಯಾಪ್ತಿಗೆ ಸಮಿತಿ ರಚಿಸಿ ಆ ಸಮಿತಿಗೆ ಐದು ಮಂದಿ ಕಬ್ಬು ಬೆಳೆಗಾರರನ್ನು ನೇಮಿಸಬೇಕು.

  • ಕಟಾವು ಮತ್ತು ಸಾಗಾಣಿಕ ವೆಚ್ಚವನ್ನು ನಿಯಮಕ್ಕೆ ವಿರುದ್ಧವಾಗಿ ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ಸಕ್ಕರೆ ಕಾರ್ಖಾನೆಗಳು ವಾಪಸ್‌ ಮಾಡಬೇಕು.

  • ಕಳೆದ ಹತ್ತು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಗಳಿಸಿರುವ ಲಾಭದಲ್ಲಿ ಆದಾಯದ ಪಾಲಿನ ಪ್ರಕಾರ ರೈತರಿಗೆ ಬಾಕಿ ಹಣ ನೀಡಬೇಕು. ಕೇಂದ್ರದ ರೈತ ವಿರೋಧಿ 2024ರ ಕರಡು ಮಸೂದೆಯನ್ನ ವಾಪಸ್‌ ಪಡೆಯಬೇಕು.

  • ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣ ಪಾವತಿ ಮಾಡಬೇಕು.

  • ವಿಜಯನಗರ, ಬಳ್ಳಾರಿ ಜಿಲ್ಲೆ ವ್ಯಾಪ್ತಿಯ ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಸಾಗಿಸುತ್ತಿದ್ದು, ಟನ್‌ಗೆ ₹3,615 ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.