
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಗೆ ಮುಂದಿನ ಜೂನ್ ಒಳಗೆ ಕ್ರೆಸ್ಟ್ಗೇಟ್ ಅಳವಡಿಕೆ ಅಸಾಧ್ಯ ಎಂಬ ಭಾವನೆ ರೈತರಲ್ಲಿ, ಜನರಲ್ಲಿ ಮೂಡಿದೆ, ಗೇಟ್ಗಳು ಸಜ್ಜಾಗಿಲ್ಲದೆ ಇರುವುದೇ ಇದಕ್ಕೆ ಕಾರಣ, ತಕ್ಷಣ ಇದನ್ನು ಪರಿಹರಿಸಿ ನಿಗದಿತ ಸಮಯದೊಳಗೆ ಗೇಟ್ ಅಳವಡಿಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜಿ.ಮಲ್ಲಿಕಾರ್ಜುನ, ಕಾರ್ಯಾಧ್ಯಕ್ಷ ಕೆ.ಎಚ್.ಮಹಾಂತೇಶ್, ಮಹಿಳಾ ಘಟಕದ ಅಧ್ಯಕ್ಷೆ ಜೆ.ಉಮಾದೇವಿ ಅವರ ನೇತೃತ್ವದಲ್ಲಿ ರೈತ ಮುಖಂಡರು ಬುಧವಾರ ಇಲ್ಲಿನ ಟಿ.ಬಿ.ಡ್ಯಾಂ ಕಚೇರಿ ಬಳಿಯಲ್ಲಿ ನಡೆಯುತ್ತಿರುವ ಗೇಟ್ ನಿರ್ಮಾಣ ಸ್ಥಳಕ್ಕೆ ತೆರಳಿದ ವೇಳೆ ಈ ಒತ್ತಾಯ ಮಾಡಲಾಯಿತು.
‘ಈ ಬಾರಿ ಎರಡನೇ ಬೆಳೆಗೆ ನೀರಿಲ್ಲದೆ ಬಹಳಷ್ಟು ರೈತರು ನಷ್ಟ ಅನುಭವಿಸುವಂತಾಗಿದೆ, ಮುಂದಿನ ಮಳೆಗಾಲದ ವೇಳೆಗಾದರೂ ಗೇಟ್ ಅಳವಡಿಕೆ ಪೂರ್ಣವಾದರೆ ಮಾತ್ರ ಭವಿಷ್ಯದ ಕೃಷಿ ಚಟುವಟಿಕೆಗಳ ಕುರಿತು ಚಿಂತಿಸಲು ಸಾಧ್ಯ, ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ವಹಿಸದೆ ಗೇಟ್ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಮಲ್ಲಿಕಾರ್ಜುನ ಮತ್ತು ಉಮಾದೇವಿ ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಸೆಕ್ಷನ್ ಎಂಜಿನಿಯರ್ ಕಿರಣ್, ಎಲ್ಲವೂ ಯೋಜನೆಯಂತೆಯೇ ನಡೆಯುತ್ತಿದೆ, ಮುಂದಿನ ಜೂನ್ ವೇಳೆಗೆ ಗೇಟ್ ಅಳವಡಿಕೆ ಪೂರ್ಣಗೊಳ್ಳಲಿದೆ, ಯಾವುದೇ ನಿರ್ಲಕ್ಷ್ಯ ವಹಿಸದೆ ಕಾಮಗಾರಿ ನಡೆಯಲಿದೆ’ ಎಂದರು.
ಸಂಘದ ತಾಲ್ಲೂಕು ಅಧ್ಯಕ್ಷ ಬಿ.ನಲ್ಲಪ್ಪ, ಹೇಮರೆಡ್ಡಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.