20 ಕ್ರೆಸ್ಟ್ಗೇಟ್ನಿಂದ ನೀರು ಹೊರಕ್ಕೆ: ಪುರಂದರ ಮಂಟಪ ಮುಳುಗಡೆ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ 78.23 ಟಿಎಂಸಿ ಅಡಿ ತಲುಪಿದ್ದು, ಗುರುವಾರ 20 ಕ್ರೆಸ್ಟ್ಗೇಟ್ಗಳನ್ನು ತೆರೆದು, 62,766 ಕ್ಯೂಸೆಕ್ನಷ್ಟು ನೀರನ್ನು ನದಿ ಮತ್ತು ಕಾಲುವೆಗಳಿಗೆ ಹರಿಸಲಾಯಿತು. ಇದರಿಂದ ಹಂಪಿಯಲ್ಲಿ ಪುರಂದರ ಮಂಟಪ ಬಹುತೇಕ ಮುಳುಗಡೆಯಾಗಿದೆ.
105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಈ ಬಾರಿ 80 ಟಿಎಂಸಿ ಅಡಿಯಷ್ಟು ನೀರನ್ನು ಮಾತ್ರ ಸಂಗ್ರಹಿಸಿ ಇಡಲು ತುಂಗಭದ್ರಾ ಮಂಡಳಿ ನಿರ್ಧರಿಸಿದೆ. ಇನ್ನಷ್ಟು ಕ್ರೆಸ್ಟ್ಗೇಟ್ಗಳನ್ನು ತೆರೆದು ನೀರು ಹೊರಬಿಡುವ ಸಾಧ್ಯತೆ ಇದೆ. ನದಿ ದಂಡೆಯ ಜನರು ಎಚ್ಚರದಿಂದ ಇರಬೇಕು ಎಂದು ಮಂಡಳಿ ಎಚ್ಚರಿಕೆ ನೀಡಿದೆ.
ಕಳೆದ ವರ್ಷ ಜುಲೈ 3ನೇ ವಾರ ಜಲಾಶಯ ಬಹುತೇಕ ಭರ್ತಿಯಾಗಿತ್ತು. ಆಗ ಕ್ರೆಸ್ಟ್ಗೇಟ್ಗಳನ್ನು ಹಂತ ಹಂತವಾಗಿ ತೆರೆದು ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗಿತ್ತು. ಆದರೆ, ಕ್ರಸ್ಟ್ಗೇಟ್ಗಳು ಶಿಥಿಲಗೊಂಡಿವೆ. ಅವುಗಳನ್ನು ಬದಲಿಸುವಂತೆ ತಜ್ಞರು ವರದಿ ನೀಡಿದ ಕಾರಣ ಈ ಬಾರಿ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹಿಸದಿರಲು ನಿರ್ಧರಿಸಲಾಗಿದೆ. ಹೀಗಾಗಿ 20 ಕ್ರೆಸ್ಟ್ಗೇಟ್ಗಳನ್ನು ತಲಾ 2.5 ಅಡಿಯಷ್ಟು ಎತ್ತಿ ನೀರು ಹೊರಬಿಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.