ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮುಸ್ಲಿಂ ಯುವಕರು ಕಪ್ಪು ಬಟ್ಟಿ ಪ್ರದರ್ಶಿಸಿದರು. ಮಹಿಳೆಯರು ಮುತ್ತಿಗೆ ಹಾಕಲು ಯತ್ನಿಸಿದರು.
ವಿಜಯಪುರ: ‘ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ ₹ 5 ಲಕ್ಷ ನಗದು ಪ್ರೋತ್ಸಾಹ ನೀಡುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಇತ್ತೀಚೆಗೆ ಕೊಪ್ಪಳದಲ್ಲಿ ನೀಡಿದ ಹೇಳಿಕೆ ವಿರೋಧಿಸಿ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಭಾನುವಾರ ಯತ್ನಾಳಗೆ ಮುಸ್ಲಿಂ ಯುವಕರು ಕಪ್ಪು ಬಟ್ಟಿ ಪ್ರದರ್ಶಿಸಿದರು. ಮಹಿಳೆಯರು ಮುತ್ತಿಗೆ ಹಾಕಲು ಯತ್ನಿಸಿದರು.
ಸಿದ್ದ ಸಿರಿ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಯತ್ನಾಳ ಅವರು ಆಲಮೇಲ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬರುತಿದ್ದಂತೆ ಕಾರು ಅಡ್ಡಗಟ್ಟಿದ ಎಂಟತ್ತು ಯುವಕರ ಗುಂಪು ಕಪ್ಪು ಬಟ್ಟಿ ಪ್ರದರ್ಶಿಸಿ, ಘೋಷಣೆ ಕೂಗಿದರು. ಸ್ಥಳದಲ್ಲಿದ್ದ ಪೊಲೀಸರು ಯುವಕರನ್ನು ವಶಕ್ಕೆ ಪಡೆದು, ಯಾವುದೇ ಅಹಿತಕರ ಘಟನೆಯಾಗದಂತೆ ತಡೆದರು.
ಬಳಿಕ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ಬಂದ ಆರೇಳು ಮುಸ್ಲಿಂ ಮಹಿಳೆಯರು ಯತ್ನಾಳಗೆ ಮುತ್ತಿಗೆ ಹಾಕಲು ಯತ್ನಿಸಿದರು. ಕುಳಿತಿದ್ದ ವೇದಿಕೆ ಏರಲು ಮುಂದಾದ ಮಹಿಳೆಯರನ್ನು ಪೊಲೀಸರು ತಡೆದರು.
‘ಯತ್ನಾಳ ಜೊತೆ ನಾವು ಮಾತನಾಡಬೇಕು ನಮ್ಮನ್ನು ಬಿಡಿ’ ಎಂದು ಮಹಿಳೆಯರು ಹಠ ಹಿಡಿದರು. ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರೊಂದಿಗೆ ಮಹಿಳೆಯರು ವಾಗ್ವಾದ ನಡೆಸಿದರು. ಬಳಿಕ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದರು. ಘಟನೆಯ ಬಳಿಕ ಬಿಗಿ ಪೊಲೀಸ್ ಬಂದೂಬಸ್ತಿನಲ್ಲಿ ಶಾಸಕ ಬಸನಗೌಡ ಯತ್ನಾಳ ವಿಜಯಪುರಕ್ಕೆ ತೆರಳಿದರು.
ನಂತರ ಪಟ್ಟಣದ ಮುಸ್ಲಿಂ ಸಮುದಾಯದ ನೂರಾರು ಜನರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ‘ಮಹಿಳೆಯರನ್ನು ಠಾಣೆಗೆ ಯಾಕೆ ಕರೆ ತಂದಿದ್ದೀರಿ, ತಕ್ಷಣ ಅವರನ್ನು ಬಿಡುಗಡೆ ಮಾಡಿ’ ಎಂದು ಆಗ್ರಹಿಸಿದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಯಿತು.
ಆಲಮೇಲ ಠಾಣೆ ಪಿಎಸ್ಐ ಅರವಿಂದ ಅಂಗಡಿ, ಸಿಪಿಐ ನಾನಗೌಡ ಪೊಲೀಸ್ ಪಾಟೀಲ ಅವರು ಮುಸ್ಲಿಂ ಮುಖಂಡರ ಜೊತೆ ಮಾತನಾಡಿ, ಮಹಿಳೆಯರನ್ನು ಬಿಟ್ಟು ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.